Tuesday, May 26, 2009

ಕನವರಿಕೆ - 3

ವ್ಯತ್ಯಾಸ

ಆಟಗಾರ
ವಿಜಯವನ್ನರಸುವುದು
ನದಿ
ಸಮುದ್ರವನ್ನರಸಿದಂತಲ್ಲ...
ವ್ಯಾಪಾರಿ
ಗಿರಾಕಿಯನ್ನರಸುವುದು
ಹುಡುಗ ಹುಡುಗಿಯನ್ನರಸಿದಂತಲ್ಲ...
ನಿರುದ್ಯೋಗಿ
ಕೆಲಸವರಸುವುದು
ದುಂಬಿ
ಹೂವನ್ನರಸಿದಂತಲ್ಲ
**********

ಚರಂಡಿ

ಹಸಿದ ವ್ಯಕ್ತಿ
ಓಲಾಡುತ್ತಾ ಬೀಳುವ ಜಾಗ
ಕುಡಿದ ವ್ಯಕ್ತಿ
ತೂರಾಡುತ್ತಾ ಮಲಗುವ ಜಾಗ
***********

ಪರಿಸರ

ಈಗ
ರಮಣೀಯ ಪ್ರಕೃತಿ,
ಹಸಿರು ವನ, ಬೆಟ್ಟ
ಪ್ರಶಾಂತ ಪರಿಸರ
ಬೇಕೆಂದರೆ
ಸಿಗುವುದು ಕಲಾವಿದನ
ಕುಂಚದಲ್ಲಿ ಮಾತ್ರ
(ಇವು ನನ್ನ ಕಾಲೇಜು ದಿನಗಳ ಕನವರಿಕೆಗಳು)

Monday, May 18, 2009

ಯಾಕೆ ಹೀಗೆ

ಚುನಾವಣೆ ರಿಸಲ್ಟ್ ಬಳಿಕ ಗೊಂದಲ ಮೂಡಿದ್ದು ನನ್ನೂರು ಮಂಗಳೂರಿನ ಆಯ್ಕೆ ಕುರಿತ ಕಮೆಂಟ್ ಗಳು.
‘ಮಂಗಳೂರಲ್ಲಿ ಕೋಮುವಾದಿಗಳ ವಿಜಯ’
‘ಇನ್ನು ಮಂಗಳೂರಿನಲ್ಲಿ ಜನಸಾಮಾನ್ಯರಿಗೆ ನಡೆದಾಡಲೂ ಸಾಧ್ಯವಿಲ್ಲ, ಇಡೀ ದ.ಕ. ಕ್ರೂರ ಜನರ, ಅನಾಗರೀಕರ ನಾಡಾಗಿರತ್ತೆ, ತಾಲಿಬಾನಿಗಳ ಬೀಡಾಗುತ್ತೆ, ಅದರಲ್ಲೂ ಮಹಿಳೆಯರಿಗೆ ಕಷ್ಟ!..’
ಸಾಮಾನ್ಯ ರಾಜಕೀಯ ಹೇಳಿಕೆಗಳಾಗಿದ್ದರೆ ಇದನ್ನು ತಳ್ಳಿ ಹಾಕಬಹುದು. ನೆನಪಿಡಿ, ಸೋತ ಜನಾರ್ಧನ ಪೂಜಾರಿಯವರೂ ವಿನಮ್ರವಾಗಿ ಸೋಲೊಪ್ಪಿಕೊಂಡಿದಾರೆ. ಆದರೆ ಇಂಥದ್ದೆಲ್ಲಾ ಮಂಗಳೂರಿನ ಹೊರಗಿರುವವರು, ಆದರೆ ಬುಧ್ಹಿಜೀವಿಗಳೆನಿಸಿಕೊಂಡವರು ವಿವಿಧ ಮಾಧ್ಯಮಗಳನ್ನು ಬಳಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ಇದು ನನ್ನಂತೆ ಹಲವರನ್ನು ಗೊಂದಲಕ್ಕೀಡುಮಾಡಿದೆ.
ಹಾಗಾದರೆ ನಳಿನ್ ಗೆ ಓಟು ಹಾಕಿದ ಸುಮಾರು ೪,೯೯,೦೦೦ ಮಂದಿಯೆಲ್ಲಾ ಅತಿಕ್ರೂರಿ ಕೋಮುವಾದಿಗಳೇ, ತಾಲಿಬಾನಿಗಳೇ ? ಜನರು ಬುದ್ದಿಗೇಡಿಗಳೇ?
ಇಂಥ ಹೇಳಿಕೆಗಳನ್ನು ನೀಡುವ ಉದ್ದೇಶವೇನು? ಜನರ ತೀರ್ಮಾನಕ್ಕೆ ಹಾಗೂ ಜನರ ಭಾವನೆಗಳಿಗೆ ಇದು ಘಾಸಿ ಮಾಡಿದಂತಾಗುವುದಿಲ್ಲವೇ? ಆತ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಗೆದ್ದವರೆಲ್ಲರೂ ಜನರ ಆಯ್ಕೆಗಳೇ ಅಲ್ಲವೇ..
ತಿಳಿದವರು ಸ್ಪಷ್ಟಪಡಿಸಬೇಕು.
( ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಪೂರ್ವಾಗ್ರಹವಿಲ್ಲದೆ ಬರೆಯುತ್ತಿದ್ದೇನೆ. )

Thursday, May 14, 2009

ಕನವರಿಕೆ ೨




ಹೌದಲ್ಲ! ನಾವೀಗ ಗಗನಚುಂಬಿಸಲು ಹೊರಟಿದ್ದೇವೆ
ಗಮ್ಯವೆತ್ತ ಗಮನವೆತ್ತ? ತಿಳಿದಿದೆಯಾ
ಬೆಂಕಿಯೂ ಕೆನ್ನಾಲಿಗೆ ಚಾಚಿ ಹೊರಟಿದೆ ನಮ್ಮೊಂದಿಗೆ
ಅಗಾಧ ಮರಳು, ನೀರ ರಾಶಿ ಇದ್ದರೂ ನಂದಿಸಲಿಲ್ಲವಲ್ಲ
ಯಾರಿಗೂ ಬೇಡ ನಮ್ಮೊಳಗೆ ಸ್ನೇಹದ ಸಹನೆಯೇ ಇಲ್ಲ
ಒಬ್ಬರಿಗಿಂತ ಒಬ್ಬರು ಹೊರಟಿದ್ದೇವೆ ಗಗನಚುಂಬಿಸಲು
ತ್ವೇಷಮಯ ಜಗಜೀವನದಲ್ಲಿ ಎಲ್ಲವೂ ಲೆಕ್ಕಾಚಾರ
ಎಲ್ಲಿದೆ ಸಂಬಂಧದ ಸಹಕಾರ?
ಉಗುಳಿದರೆ ಬೆಂಕಿ, ಕಾರುವುದೂ ವಿಷವೇ
ಜಗತ್ತು ಕಿರಿದಾದಂತೆ ಮಾನವತೆ ಸುಟ್ಟುಹೋಗಿದೆ
ನಂದಿಸಲು ನಾವೆಲ್ಲಿ?
ನಾವೀಗ ಗಗನಚುಂಬಿಸಲು ಹೊರಟಿದ್ದೇವೆ

Monday, May 4, 2009

ಬೇಲಿ, ಹೊಲ ಮತ್ತು ಕಾನೂನು

ರ್ನಾಟಕದಲ್ಲಿ ಚುನಾವಣೆ ಸಂದರ್ಭ ಕರ್ತವ್ಯಕ್ಕೆಂದು ಹೊರರಾಜ್ಯಗಳಿಂದ ಆಗಮಿಸಿದ್ದ ಆರಕ್ಷಕರ ‘ದುರ್ವರ್ತನೆ’ಯ ಮೂರು ಪ್ರಕರಣಗಳು ದಾಖಲಾದವು. ಅವುಗಳಲ್ಲಿ ಎರಡು ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಮೊದಲನೆ ಪ್ರಕರಣದಲ್ಲಿ ಬಂಟ್ವಾಳದಲ್ಲಿ ನಿಯೋಜಿತರಾಗಿದ್ದ ಕೇರಳ ಪೊಲೀಸರು ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಕಾರಣ. ಅಲ್ಲಿ ಇದ್ದ ಸಾರ್ವಜನಿಕರು ಈ ಪೊಲೀಸರನ್ನು ‘ವಿಚಾರಿಸಿ’ ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು. ಈ ಸಂದರ್ಭ ತಳ್ಳಾಟ, ಹೊಡೆದಾಟಗಳು ಆದವು. ಬಳಿಕ ಕೋರ್ಟಿಗೆ ಹಾಜರುಪಡಿಸುವ ವೇಳೆ ಪತ್ರಿಕಾ ಛಾಯಾಗ್ರಾಹಕರನ್ನು ಇದೇ ಆರೋಪಿಗಳು ದುರುಗುಟ್ಟಿ ನೋಡಿದ್ದೂ ಆಯಿತು.
ಇನ್ನೊಂದು ಪ್ರಕರಣ ದುರಂತಮಯವಾಯಿತು. ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲೇ ‘ಜಬರ್ದಸ್ತ್’ ಮಾಡುತ್ತಿದ ಆಂಧ್ರ ಪೊಲೀಸರು ಸಂಜೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರೊಂದಿಗೆ ಕದನಕ್ಕಿಳಿದರು. ಇಲ್ಲೂ ಮಾತಿನ ವಿನಿಮಯವಾದವು. ಗುಂಡು ಹಾರಿಸಿ ಒಬ್ಬನನ್ನು ಕೊಂದದ್ದೂ ಆಯಿತು. ಸಾರ್ವಜನಿಕರು ಟಯರ್ ಪೇರಿಸಿ ಕಿಚ್ಹು ಕೊಟ್ಟು ಪ್ರತಿಭಟನೆ ನಡೆಸಿದರು. ಮರುದಿನ ಊರು ಬಂದ್ ಮಾಡಿದರು.
ಕೆಲವು ಪತ್ರಿಕೆ, ವಬ್ ಸೈಟ್ ಗಳಲ್ಲಿ “ಪೊಲೀಸರು ‘ಪಾಪ’ ಅವರು ಹೆಂಡತಿ ಮಕ್ಕಳನ್ನು ಬಿಟ್ಟು ಬರುತ್ತಾರೆ ನೋಡಿ ಹೀಗಾಗಿಯೇ ಸ್ವಲ್ಪ ಗುಂಡು ಹಾಕಿ ಹೆಂಗಸರ ಮೈಮೇಲೆ ಕೈ ಹಾಕಿದರೆ ಅದು ವ್ಯವಸ್ಥೆಯದ್ದೇ ತಪ್ಪು. ಸಾರ್ವಜನಿಕರು ಹಾಗೆ ದನಕ್ಕೆ ಬಡಿದ ಹಾಗೆ ಹೊಡೆಯುವಿದು ಎಲ್ಲಾದರೂ ಉಂಟಾ” ಎಂಬ ಅರ್ಥ ನೀಡುವ ಬರೆಹಗಳನ್ನು ಪ್ರಕಟಿಸಿದವು. ಬಿಡಿ, ಅದು ಅವರವರ ಅಭಿಪ್ರಾಯ ಎಂದಾಯಿತು.
ಆದರೆ ಸಾಮಾನ್ಯ ನಾಗರಿಕನೊಬ್ಬ ಪೊಲೀಸ್ ಮಾಡುವ ತಪ್ಪಿಗೆ ಕಾನೂನು ಕೈಗೆತ್ತಿಕೊಂಡು ಯಾತಕ್ಕಾಗಿ ಪ್ರತಿಭಟಿಸುತ್ತಾನೆ? ಇದು ಸರಿಯಾ, ತಪ್ಪಾ, ಹಾಗಾದರೆ ಪೊಲೀಸರು ಕೆಟ್ಟ ಕೆಲಸ ಮಾಡಿದಾಗ ಯಾವ ರೀತಿ ಪ್ರತಿಭಟಿಸಬೇಕು? ಉದಾ: ಮಂಗಳೂರು, ಧರ್ಮಸ್ಥಳ ಘಟನೆಗಳಲ್ಲಿ ಏನು ಮಾಡಬಹುದಿತ್ತು?
ಪ್ರಾಕ್ಟಿಕಲ್ ಆದ ಉತ್ತರಗಳು ಸಿಗಬಹುದೇ?

Friday, May 1, 2009

ನಮ್ಮೂರು ಚೆನ್ನಾಗಿದೆ !

ಅಂತೂ ಮುಗಿಯಿತು.ನಮ್ಮೂರಲ್ಲಿ ಚುನಾವಣೆ. ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬುದು ಮುಂದಿನ ಮಾತು.
ಯಾರು ಗೆದ್ದರೂ ಅದು ಜನತೆಯ ವಿಜಯ ಎಂಬುದು ನನ್ನ ಅನಿಸಿಕೆ.
ಏಕೆಂದರೆ, ನಮ್ಮ ಮಂಗಳೂರು ಮತ್ತು ಉಡುಪಿಯಲ್ಲಿ ಗರಿಷ್ಟ ಮತ ಚಲಾವಣೆಯಾಗಿದೆ. ನಾವು ಬೆಂಗಳೂರಿನವರಷ್ಟು ಬುದ್ದಿವಂತರಲ್ಲದಿರಬಹುದು. ಆದರೆ ಹೆಚ್ಹಿನ ಪಾಲು ಓಟು ಹಾಕಿದ್ದೇವೆ. ಯಾವುದೇ ಹೆಂಡ, ಹಣಕ್ಕೆ ಯಾರೂ ಬಗ್ಗಿಲ್ಲ. ಯಾರು ನಮ್ಮ ಕಣ್ಣಿಗೆ ಸೂಕ್ತ ಎಂದು ಕಾಣುತ್ತಾರೋ ಅವರಿಗೆ ಓಟು ಹಾಕಿದ್ದೇವೆ. ನಕಲಿ ಮತದಾನ ಮಾಡಿಲ್ಲ. ಹೇಡಿ ನಕ್ಸಲರ ಬೆದರಿಕೆಗೆ ಜಗ್ಗಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಯಾರೋ ಅರೆಬುದ್ದಿಜೀವಿಗಳು ಇಡೀ ಮಂಗಳೂರಿನವರನ್ನು ‘ತಾಲಿಬಾನಿಗಳು’ ಎಂದು ಹೇಳಿದ್ದಕ್ಕೆ ನಾವ್ಯಾರೂ ಸೊಪ್ಪು ಹಾಕಿಲ್ಲ.
ಹಲವಾರು ಮಂದಿಗೆ ಸಂಕಟವಾಗಿದ್ದಿರಬಹುದು. ಏನೆಂದರೆ ನಮ್ಮೂರಲ್ಲಿ ಚುನಾವಣೆ ಶಾಂತಿಯುತವಾಯಿತು ಎಂಬುದೇ ಮಿರಾಕಲ್.
ಅದಕ್ಕೇ ನೋಡಿ ಸುಳ್ಯದಲ್ಲಿ ಕುಡಿದು ಮಾಡಿದ ಸಣ್ಣ ತಕರಾರೊಂದನ್ನು ಬ್ರೇಕಿಂಗ್ ನ್ಯೂಸ್ ಆಗಿ ಚಾನೆಲೊಂದು ಬಿತ್ತರಿಸಿತು. ಅದನ್ನು ನೋಡಿ ಇನ್ನೊಂದು ಚಾನೆಲ್ ಕೂಡ ಫ್ಲ್ಯಾಷ್ ನ್ಯೂಸ್ ಆಗಿ ತೋರಿಸಿತು. ಆದರೆ Sorry..
ಈಗ ಎಲ್ಲೆಲ್ಲೂ ಶಾಂತಿ. ಧರ್ಮಸ್ಥಳ ಘಟನೆಯೊಂದನ್ನು ಬಿಟ್ಟರೆ..
ಕುಡಿದ ಮತ್ತಿನಲ್ಲಿ ‘ಪೋಲೀ’ಸ್ ಧರ್ಮಸ್ಥಳ ದೇವಸ್ಥಾನದ ಪಾಪದ ನೌಕರನಿಗೆ ಗುಂಡು ಹಾರಿಸಿಬಿಟ್ಟ ಘಟನೆ ಪತ್ರಿಕೆಗಳಲ್ಲಿ ಓದಿರಬಹುದು. ಟಿ.ವಿ.ಗಳಿಂದ ಸುದ್ದಿ ಗೊತ್ತಾಗಿರಬಹುದು. ಆದರೂ ನಮ್ಮ ಜನ ಆ ಪಾಪಿಯ ಬಂಧನವಾಗುವ ಕುರಿತು ಒತ್ತಾಯಿಸಿದರು. ಊರು ಬಂದ್ ಮಾಡಿದರು. ಇಲ್ಲಿಯೂ ಜಾತಿ, ಮತ ಎಂದು ಯಾರೂ ಲೆಕ್ಕ ಹಾಕಲಿಲ್ಲ.
ನೀವು ಬಿಜೆಪಿಯೋ , ಕಾಂಗ್ರೆಸ್ಸೋ, ಕಮ್ಯೂನಿಷ್ಟೋ ಬೇರೆ ಮಾತು. ಚುನಾವಣೆಯಲ್ಲಿ ಗೆದ್ದ ಪಕ್ಷವೋ ಅಭ್ಯರ್ಥಿಯೋ ‘ಸರಿ ಇಲ್ಲ’ ಎಂದು ಇನ್ನು ನೀವು ಹೇಳಿದರೆ, ನಮ್ಮೂರ ಜನರೇ ಸರಿ ಇಲ್ಲ ಎಂದು ನಾನು ತಿಳಿದುಕೊಳ್ಳಬೇಕದೀತು. ನಾನಂತೂ ಜನರ ತೀರ್ಮಾನವನ್ನು ಗೌರವಿಸುತ್ತೇನೆ.
ಇರಲಿ ಅದು ಮುಂದಿನ ಮಾತು.
ನಮ್ಮೂರು ಚೆನ್ನಾಗಿದೆ ಎಂಬುದೇ ಈಗಿರುವ ಸತ್ಯ.