Sunday, November 30, 2008

ಅಳಿದ ಮೇಲೆ..

ಸತ್ಯಮೇವ ಜಯತೇ ಎನ್ನಲು ನಾಲಗೆ
ಹೊರಳುತ್ತಿಲ್ಲ ಕಾರಣ ಊರು ತುಂಬ
ಅಸತ್ಯ, ಅನೀತಿ, ಅಸಹ್ಯ ಮಾತುಗಳ
ಬರೆಹಗಳ ಸುರಿಮಳೆಯ ದರ್ಶನ
ದುಸ್ಸಾಹಸ, ದುಷ್ಟಬುದ್ದಿ, ದುರಾಕ್ರಮಣ
ಎಂದು ನಾವು ಮತ್ತೆ ಮತ್ತೆ ನಮ್ಮನ್ನೇ
ದೂರುವ ಸಂದರ್ಭ ಬೇಕಿತ್ತೆ
ಮುಂಬಯಿಯಲ್ಲಿ ದೊಡ್ಡ ದೊಡ್ದ ಮನುಜರ
ಕತ್ತರಿಸಿ ಕೊಂದ ನೆತ್ತರ ಕೋಡಿ ಹರಿಸಿದ
ಮೇಲಷ್ಟೇ ಪ್ರಪಂಚಕ್ಕೆ ಅರಿವಾಯಿತು
ಮತಾಂಧರ ಉನ್ಮತ್ತ ಹೆಜ್ಜೆಯ ಗುರುತು
ಮೈಕು ಹಿಡಿಸುವ ಮಲ್ಟಿನ್ಯಾಶನಲ್ ಮೀಡಿಯಾ
ದೊರೆಗಳು, ಕೊಚ್ಹೆಗುಂಡಿಗಳಿಗೆ ಹೋಗಲು
ಹೇಳುತ್ತಿಲ್ಲ, ಏಕೆಂದರೆ ಅವಕ್ಕೂ ಬೇಕು ಮಾರ್ಕೆಟ್
ಅದಕ್ಕಾಗಿ ಭಾರತವಿಂದು ಭೀತಿವಾದಿಗಳ, ಕೊಳಕು
ಜನರ ಬೇಳೆ ಬೇಯಿಸುವ ಟಾರ್ಗೆಟ್..

Monday, November 10, 2008

ಪಯಣದ ಹಾದಿ..

ಅಂದು ಸುಮ್ಮನೇ ಕುಳಿತು
ಪರ್ವತದ ಶಿಖರದಿಂದ
ಬಗ್ಗಿ ನೋಡಿ ಪುಟ್ಟ ಮನೆ,
ಬಸ್ಸುಗಳ ನೋಡಿ ಖುಷಿಯಿಂದ
ಕುಣಿದಿದ್ದೆ....
ನಾನೆಷ್ಟು ಎತ್ತರದಲ್ಲಿದ್ದೇನೆ?
ಮತ್ತೆ ಹಾಗೇ ಇಳಿದು ಸುಮ್ಮನೇ
ರಸ್ತೆಯಲ್ಲಿರುವ ದೊಡ್ಡ ದೊಡ್ದ
ಲಾರಿ ಬಸ್ಸುಗಳ ನೋಡಿ
ಮಂಕಾದೆ...
ನಾನೆಷ್ಟು ಕೆಳಗಿದ್ದೇನೆ?
ಯಾರೋ ಹೇಳಿದರು,
ನಾನು ನೋಡಿ ತಿಳಿದೆ
ಎತ್ತರಕ್ಕೆ, ಪಾತಾಳಕ್ಕೆ
ಪಯಣಿಸುವುದು ನಮ್ಮ ಕೈಯಲ್ಲೇ
ಇದೆ..ಅದು ಸುಮ್ಮನೇ ನಮ್ಮ ಹಾದಿಯಲ್ಲಿ
ಬೇಡವಾದಾಗಲೂ ಸಿಗುತ್ತದೆ
ಆದರೆ ಬೆಟ್ಟ ಅಣಕಿಸುತ್ತದೆ
ನಾನೇರಿದೆತ್ತರಕೆ ನೀನೇರಬಲ್ಲೆಯಾ?