Wednesday, December 17, 2008

ಕಾರಂತ ನೆನಪಿನೊಂದಿಗೆ..




ಬಾಬುಕೋಡಿ ವೆಂಕಟ್ರಮಣ ಕಾರಂತ...!
ಹಾಗಂತ ಹೇಳಿದರೆ ಫಕ್ಕನೆ ಗೊತ್ತಾಗಲಿಕ್ಕಿಲ್ಲ
ಬಿ.ವಿ.ಕಾರಂತ ಅಂದರೆ ಸಾಕು. ಮತ್ತೆ ವಿವರಣೆ ಬೇಕಿಲ್ಲ..!
ಅಂಥವರೊಬ್ಬರು ಹುಟ್ಟಿ ಬೆಳೆದ ಊರಿಗೆ ಸಮೀಪವೇ ನಾನೂ ಇದ್ದೇನೆ ಅನ್ನುವುದೇ ರೋಮಾಂಚನ ತರುವ ವಿಷಯ. ಮೊನ್ನೆ ಅವರ ಹುಟ್ಟೂರಲ್ಲಿ (ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿ) ಊರವರು ಮತ್ತು ಕಾರಂತರ ಬೆಂಗಳೂರು, ಇತ್ಯಾದಿಗಳ ಒಡನಾಡಿಗಳೆಲ್ಲಾ ಸೇರಿ ಬಿ.ವಿ.ಕಾರಂತ ನೆನಪು ಜೊತೆಗೆ ನಾಟಕೋತ್ಸವ, ವಿಚಾರ ಸಂಕಿರಣಗಳನ್ನು ಆಯೋಜಿಸಿದರು. ಸ್ನೇಹಿತ ಕಜೆ ನರಸಿಂಹ ಭಟ್ ಜೊತೆ ಆ ಶುಕ್ರವಾರ ಬಿ.ಸಿ.ರೋಡಿನಿಂದ ಬೈಕಿನಲ್ಲಿ ಮಂಚಿಗೆ ತಲುಪಿದಾಗ ಸೂರ್ಯ ಹೊರಡುವ ತಯಾರಿ ನಡೆಸಿದ್ದ. ಆಗಲೇ ಕಾರಂತರ ಶಾಲೆಯಾದ ಮಂಚಿ ಕುಕ್ಕಾಜೆ ಸರ್ಕಾರಿ ಶಾಲೆಯಲ್ಲಿ ಸ್ತೇಜ್ ಸೆಟ್ತಿಂಗ್ ನಡೆಯುತ್ತಿತ್ತು. ತುಮರಿಯ ಕೃಷ್ಣಮೂರ್ತಿ, ಪುತ್ತೂರಿನ ಐ.ಕೆ.ಬೊಳುವಾರು ಸಂಗಡಿಗರಿಗೆ ಹಾಗಲ್ಲ, ಹೀಗೆ ಅನ್ನುತ್ತಾ ನಿರ್ದೇಶನ ತಯಾರಿ ಮಾಡಿತ್ತಿದ್ದರು. ಇವರೊಂದಿಗೆ ಅಂದು ಅಭ್ಯಾಗತದಾಗಿ ಡುಂಡಿರಾಜ್, ನಾಟಕ ಅಕಾಡೆಮಿ ಸದಸ್ಯ ಕುಮಾರಸ್ವಾಮಿ ಮೊದಲಾದವರು ಇದ್ದರು. ಅದೊಂದು ಅಪ್ಪಟ ಹಳ್ಳಿಯ ವಾತಾವರಣ. ಸ್ವಚ್ಹ ನಿಷ್ಕಲ್ಮಶ ಮನಸ್ಸಿನ ಆತ್ತಿಥೇಯರು. ಪ್ರಶಾಂತವಾದ ಗಾಳಿ, ಬೆರಗುಗಣ್ಣಿನ ಸ್ಥಳೀಯರು ನೋಡನೋಡುತ್ತಿದ್ದಂತೆ ಸಭಾ ಕಾರ್ಯಕ್ರಮ ಆರಂಭ ಆಯಿತು. ಕಾರಂತರ ಒಡನಾಡಿಗಳು, ಅವರ ಸ್ಮರಣೆ ಮಾಡಿದರು. ಬಳಿಕ ಮಕ್ಕಳ ನಾಟಕ. ಹೊತ್ತು ಹೋದದ್ದೇ ಗೊತ್ತಾಗಲಿಲ್ಲ.
ಮರುದಿನ ಶನಿವಾರವೂ ಸಂಜೆ ನಾಟಕ ಪ್ರದರ್ಶನ. ಅದೂ ಹೌಸ್ ಫುಲ್..!
ಭಾನುವಾರ ವಿಚಾರಸಂಕಿರಣ. ಮೈಸೂರಿನ ರಮೇಶ್, ಉಡುಪಿಯ ವೈದೇಹಿ, ದೆಹಲಿಯ ಶ್ರೀನಿವಾಸ್, ಐತಾಳ್ ....ಹೀಗೆ ನಾಟಕಗಳ ಬಗ್ಗೆ ಇದ್ದ ವಿಚಾರಸಂಕಿರಣವೆಲ್ಲಾ ಕಾರಂತ ಸ್ಮರಣೆಯೇ ಆಯಿತು. ಸಮಾರೋಪಕ್ಕೂ ಅರ್ಥಪೂರ್ಣವಾದ ನಾಟಕ ಪ್ರದರ್ಶನ.

********************
ಯಾರೋ ಮಂಚಿಯನ್ನು ಹೆಗ್ಗೋಡಿನಂತೆ ಮಾರ್ಪಡಿಸಬೇಕು. ಇದು ಬಿ.ವಿ.ಕಾರಂತರಿಗೆ ಅರ್ಥಪೂರ್ಣ ಶ್ರ ಧಾಂಜಲಿ ಅಂದರು. ಆದರೆ ನನಗನಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಇಂದು ನಾಟಕಕಾರರು, ವಿಚಾರವಂತರು ಅದರಲ್ಲೂ ಅಕಾಡೆಮಿಕ್ ವಲಯದವರು ಗಂಭೀರವಾಗಿ ಆಲೋಚಿಸುವ ಕಾಲ. ಎಲ್ಲಾ ರಂಗಕರ್ಮಿಗಳನ್ನೂ ಒಗೊಡಿಸುವುದು.
ನಮ್ಮ ದ.ಕ.ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇಂದಿಗೂ ತುಳು ರಂಗಭೂಮಿ ಇಲ್ಲಿ ಜನಪ್ರಿಯ. ಇಲ್ಲಿನ ಕಲಾವಿದರು ಈಗಲೂ ಸ್ಟಾರ್ ಗಳು. ನಾಟಕ ಪ್ರದರ್ಶನವಿರುವ ಕಡೆ ಇಲ್ಲಿ ಇಂದಿಗೂ ನೂಕು ನುಗ್ಗಲು ಇದೆ. ಆದರೆ ಅದೇ ಜಾಗದಲ್ಲಿ ನೀನಾಸಂ ನಂಥ ತಂಡ ನಾಟಕ ಪ್ರದರ್ಷಿಸಿದರೆ ನೋಡಲು ಜನವೇ ಇಲ್ಲ. ಇದ್ದರೂ ಯು.ಜಿ.ಸಿ. ಸಂಬಳ ಪಡೆಯುವ ಕಾಲೇಜು ಉಪನ್ಯಾಸಕರು, ಸಾಹಿತ್ಯದ ಒಲವಿರುವ ಸಣ್ಣ ವರ್ಗ. ಹೀಗಾದರೆ ಆ ನಾಟಕ ಯಾರನ್ನು ತಲ್ಪುತ್ತದೆ?
ನಾವ್ಯಾಕೆ ಜನಪ್ರಿಯ ನಾಟಕಗಳ ಕಲಾವಿದರನ್ನು ನೀನಾಸಂ ಥರದ ಕಲಾವಿದರನ್ನು ಒಟ್ಟು ಸೇರಿಸಬಾರದು?
ಇಂಥದ್ದೇ ಪ್ರಶ್ನೆಯನ್ನು ಮೊನ್ನೆ ಮಂಚಿಗೆ ಬೆಂಗಳೂರಿನಿಂದ ಬಂದ ಬುದ್ದಿವಂತ "ರಂಗಕರ್ಮಿ’ಯನ್ನು ಯಾರೋ ಖಾಸಗಿಯಾಗಿ ಕೇಳಿದರಂತೆ. ಆಗವರು ಕೆಕ್ಕರಿಸಿ ನೋಡಿದರಂತೆ.

ಅಟ್ ಲೀಸ್ಟ್ ಬಿ.ವಿ.ಕಾರಂತ ಜೀವನಗಾಥೆಯನ್ನಾದರೂ ಅಂಥ ಮನೋಸ್ಥಿತಿಯುಳ್ಳವರು ಓದಲಿ..
ರಂಗಭೂಮಿ ಒಟ್ಟಾಗಲಿ... ಯುನಿವರ್ಸಿಟಿ ಪ್ರೊಫೆಸರ್, ಆಟೋ ಡ್ರೈವರ್ ಜತೆಜತೆಯಾಗಿ ಕುಳಿತು ಒಂದೇ ನಾಟಕವನ್ನು ನೋಡಿ, ಸರಿ ತಪ್ಪುಗಳ ವಿಮರ್ಷೆ ಮಾಡಲಿ..
ಹಾಗಾಗಬಹುದೇ?

ಸಿಂಗಲ್ ಕಾಲಂ ಸುದ್ದಿ ! ?

"ನಮಸ್ಕಾರ ಮಾರಾಯ್ರೆ”
ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕಿನ ಎದುರು ನಿಲ್ಲುವ ಟ್ಯಾಕ್ಸಿಗಳಲ್ಲಿ ಕುಳಿತುಕೊಳ್ಳುವ ಚಾಲಕರ ಪೈಕಿ ಆ ನಗುಮುಖದ ವ್ಯಕ್ತಿ ಹಾಗೆ ಹೇಳುವುದುಂಟು. ಇದು ಪ್ರತಿನಿತ್ಯದ ಕಾಯಕವಾದ ಕಾರಣ ಅಲ್ಲೇ ಬಸ್ಸಿಗೆಯೋ, ಇತರ ಕೆಲಸಕ್ಕೆಂದು ಹೋಗುವಾಗಲೋ ನಾನೂ ನಮಸ್ಕಾರ ಹೇಗಿದ್ದೀರಿ ಎಂಬ ಮಾಮೂಲಿ ಡೈಲಾಗ್ ಹೇಳುತ್ತೇನೆ. ಆತ ಸುಮ್ಮನೆ ನಗುತ್ತಾನೆ. ಅಲ್ಲಿಗೆ ನಮ್ಮ ಸಂಭಾಷಣೆ ಖತಂ.
ತಿಂಗಳ ಹಿಂದೆ ಸಾರಿಗೆ ಮಂತ್ರಿ ಅಶೋಕ್ ಖಾಸಗಿ ಬಸ್ಸುಗ್ಗಳನ್ನು ನಿಲ್ಲಿಸುವ ಪ್ರಸ್ತಾಪ ಇದೆ ಎಂದಾಗ ನಾನು ಆತನನ್ನು ಮಾತಿಗೆಳೆದೆ.
"ನಿಮ್ಮ ಚಾನ್ಸ್..ಇನ್ನು ಬಾಡಿಗೆ ಹೆಚ್ಹಾಗಬಹುದು”
’ಯಾರು ಹೇಳಿದ್ದು ನಿಮಗೆ’ ಆತ ಹೇಳಿದ. "ನಮ್ಮ ಬಾಡಿಗೆ, ವಹಿವಾಟು ಮಾಮೂಲಿಯಾಗೇ ಇರುತ್ತದೆ. ನನ್ನದು ಫಿಕ್ಸೆಡ್ ರೇಟ್. ಬೆಳಗ್ಗೆ ೬ಕ್ಕೆಲ್ಲಾ ಟ್ಯಕ್ಸಿ ಸ್ಟೇಂಡ್ ನಲ್ಲಿ ಇರ್ತೇನೆ. ಏರ್ಪೋರ್ಟ್, ರೈಲ್ವೇ ಸ್ಟೇಶನ್ ಗೆಂದು ಬರುವವರು, ಜಾಗ ಅಳೆಯಲು ಬರುವ ವಕೀಲರು ಹೀಗೆ ನನ್ನದೇ ಆದ ಕೆಲವು ಪಾರ್ಟಿ ಇರ್ತದೆ. ಹೇಗೋ ಹೊಟ್ಟೆಪಾಡು ನಡೆಯುತ್ತದೆ. ಎಲ್ಲಾ ಉಳಿಸಿ, ದಿನಕ್ಕೆ ೨೫೦ ರು. ಆದರೆ ಪುಣ್ಯ”
ಹೀಗೆ ಮಾತನಾಡಿದ ಮೇಲೆ ಆತ ತನ್ನ ಹೆಸರು ಹೇಳಿದ. "ನನ್ನ ಹೆಸರು ಸೂರ್ಯನಾರಾಯಣ. ಬಾಡಿಗೆ ಇದ್ದರೆ ಹೇಳಿ”
ಆಯ್ತು ಎಂದು ನಾನು ಹೊರಟೆ..
ಅದಾದ ಬಳಿಕ ನಮಸ್ಕಾರದಲ್ಲೇ ಮುಕ್ತಾಯ..
ಮೊನ್ನೆ ಎಂದಿನಂತೆ ಮಂಗಳೂರಿಗೆ ಹೋಗುವಾಗ ತುಂಬೆ ರಾಮಲ್ಕಟ್ಟೆ ಹತ್ತಿರ ನಜ್ಜುಗುಜ್ಜಾದ ಅಂಬಾಸಿಡರ್ ಕಾರು ಕಂಡಿತು. ಛೇ.. ಎಂದು ಮರುಕ ವ್ಯಕ್ತಪಡಿಸಿ ಅಫೀಸ್ ನ ಇತರ ವ್ಯವಹಾರದಲ್ಲಿ ಮುಳುಗಿದೆ. ಆದರೆ ರಾತ್ರಿ ಬಂದ ವರದಿ ಹೀಗಿತ್ತು.
ಅದಿರು ಲಾರಿ ಟೂರಿಸ್ಟ್ ಕಾರು ಮುಖಾಮುಖಿ, ಕಾರು ಚಾಲಕ ಸಾವು..
ಚಾಲಕನ ಹೆಸರು ಸೂರ್ಯನಾರಾಯಣ.
ಬೆಳಗಿನ ಜಾವ ರಾಂಗ್ ಸೈಡ್ದ್ನಲ್ಲಿ ಬಂದ ಅದಿರು ಲಾರಿ ಚಾಲಕನ್ನನ್ನು ಬಲಿ ತೆಗೆದುಕೊಂಡಿತು..
ಸಿಂಗಲ್ ಕಾಲಂ ಸುದ್ದಿ ಯಲ್ಲಿ ಸೂರ್ಯನಾರಾಯಣನ ಬದುಕು ಕೊನೆಗೊಂಡಿತ್ತು.
ಸೂರ್ಯ ಮೂಡುವುದಕ್ಕೆ ಸ್ವಲ್ಪ ಮೊದಲು ಅರ್ಧಕ್ಕೆ ನಿಂತ ಹೆದ್ದಾರಿ ಕಾಮಗಾರಿಯ ಅವಶೇಷಗಳಿಂದ ಎದ್ದ ಧೂಳು ನಿದ್ದೆಗಣ್ಣಲ್ಲಿ ರಾಂಗ್ ಸೈಡ್ನಲ್ಲಿ ಸಾಗಿದ ಅದಿರು ಲಾರಿಯು, ಸೂರ್ಯನಾರಾಯಣನ ಬದುಕಿನಲ್ಲಿ ಮತ್ತೆ ಸೂರ್ಯ ಮೂಡದಂತೆ ಮಾಡಿತ್ತು.
----------------
ನಿಮಗಿದು ಬೋರ್ ಶಬ್ದಗಳು ಎನಿಸಬಹುದೇನೋ..ಆದರೆ ಪ್ರತಿರಾತ್ರಿ ನಾನು ಮನೆಗೆ ಹೋಗುವ ವೇಳೆ ತುಂಬೆಯತ್ತ ನನ್ನ ವಾಹನ ಹೋಗುವಾಗಲೆಲ್ಲಾ ಸೂರ್ಯನಾರಾಯಣ ನೆನಪಾಗುತ್ತಾನೆ..

ಹೆಡ್ಲೈಟ್ ಡಿಮ್ ಮಾಡದ ಅತಿಕಾಯ ಅದಿರು ಲಾರಿಗಳೆಲ್ಲಾ ಯಮದೂತರಂತೆ ಕಾಡುತ್ತಾರೆ..