Wednesday, December 17, 2008

ಕಾರಂತ ನೆನಪಿನೊಂದಿಗೆ..




ಬಾಬುಕೋಡಿ ವೆಂಕಟ್ರಮಣ ಕಾರಂತ...!
ಹಾಗಂತ ಹೇಳಿದರೆ ಫಕ್ಕನೆ ಗೊತ್ತಾಗಲಿಕ್ಕಿಲ್ಲ
ಬಿ.ವಿ.ಕಾರಂತ ಅಂದರೆ ಸಾಕು. ಮತ್ತೆ ವಿವರಣೆ ಬೇಕಿಲ್ಲ..!
ಅಂಥವರೊಬ್ಬರು ಹುಟ್ಟಿ ಬೆಳೆದ ಊರಿಗೆ ಸಮೀಪವೇ ನಾನೂ ಇದ್ದೇನೆ ಅನ್ನುವುದೇ ರೋಮಾಂಚನ ತರುವ ವಿಷಯ. ಮೊನ್ನೆ ಅವರ ಹುಟ್ಟೂರಲ್ಲಿ (ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿ) ಊರವರು ಮತ್ತು ಕಾರಂತರ ಬೆಂಗಳೂರು, ಇತ್ಯಾದಿಗಳ ಒಡನಾಡಿಗಳೆಲ್ಲಾ ಸೇರಿ ಬಿ.ವಿ.ಕಾರಂತ ನೆನಪು ಜೊತೆಗೆ ನಾಟಕೋತ್ಸವ, ವಿಚಾರ ಸಂಕಿರಣಗಳನ್ನು ಆಯೋಜಿಸಿದರು. ಸ್ನೇಹಿತ ಕಜೆ ನರಸಿಂಹ ಭಟ್ ಜೊತೆ ಆ ಶುಕ್ರವಾರ ಬಿ.ಸಿ.ರೋಡಿನಿಂದ ಬೈಕಿನಲ್ಲಿ ಮಂಚಿಗೆ ತಲುಪಿದಾಗ ಸೂರ್ಯ ಹೊರಡುವ ತಯಾರಿ ನಡೆಸಿದ್ದ. ಆಗಲೇ ಕಾರಂತರ ಶಾಲೆಯಾದ ಮಂಚಿ ಕುಕ್ಕಾಜೆ ಸರ್ಕಾರಿ ಶಾಲೆಯಲ್ಲಿ ಸ್ತೇಜ್ ಸೆಟ್ತಿಂಗ್ ನಡೆಯುತ್ತಿತ್ತು. ತುಮರಿಯ ಕೃಷ್ಣಮೂರ್ತಿ, ಪುತ್ತೂರಿನ ಐ.ಕೆ.ಬೊಳುವಾರು ಸಂಗಡಿಗರಿಗೆ ಹಾಗಲ್ಲ, ಹೀಗೆ ಅನ್ನುತ್ತಾ ನಿರ್ದೇಶನ ತಯಾರಿ ಮಾಡಿತ್ತಿದ್ದರು. ಇವರೊಂದಿಗೆ ಅಂದು ಅಭ್ಯಾಗತದಾಗಿ ಡುಂಡಿರಾಜ್, ನಾಟಕ ಅಕಾಡೆಮಿ ಸದಸ್ಯ ಕುಮಾರಸ್ವಾಮಿ ಮೊದಲಾದವರು ಇದ್ದರು. ಅದೊಂದು ಅಪ್ಪಟ ಹಳ್ಳಿಯ ವಾತಾವರಣ. ಸ್ವಚ್ಹ ನಿಷ್ಕಲ್ಮಶ ಮನಸ್ಸಿನ ಆತ್ತಿಥೇಯರು. ಪ್ರಶಾಂತವಾದ ಗಾಳಿ, ಬೆರಗುಗಣ್ಣಿನ ಸ್ಥಳೀಯರು ನೋಡನೋಡುತ್ತಿದ್ದಂತೆ ಸಭಾ ಕಾರ್ಯಕ್ರಮ ಆರಂಭ ಆಯಿತು. ಕಾರಂತರ ಒಡನಾಡಿಗಳು, ಅವರ ಸ್ಮರಣೆ ಮಾಡಿದರು. ಬಳಿಕ ಮಕ್ಕಳ ನಾಟಕ. ಹೊತ್ತು ಹೋದದ್ದೇ ಗೊತ್ತಾಗಲಿಲ್ಲ.
ಮರುದಿನ ಶನಿವಾರವೂ ಸಂಜೆ ನಾಟಕ ಪ್ರದರ್ಶನ. ಅದೂ ಹೌಸ್ ಫುಲ್..!
ಭಾನುವಾರ ವಿಚಾರಸಂಕಿರಣ. ಮೈಸೂರಿನ ರಮೇಶ್, ಉಡುಪಿಯ ವೈದೇಹಿ, ದೆಹಲಿಯ ಶ್ರೀನಿವಾಸ್, ಐತಾಳ್ ....ಹೀಗೆ ನಾಟಕಗಳ ಬಗ್ಗೆ ಇದ್ದ ವಿಚಾರಸಂಕಿರಣವೆಲ್ಲಾ ಕಾರಂತ ಸ್ಮರಣೆಯೇ ಆಯಿತು. ಸಮಾರೋಪಕ್ಕೂ ಅರ್ಥಪೂರ್ಣವಾದ ನಾಟಕ ಪ್ರದರ್ಶನ.

********************
ಯಾರೋ ಮಂಚಿಯನ್ನು ಹೆಗ್ಗೋಡಿನಂತೆ ಮಾರ್ಪಡಿಸಬೇಕು. ಇದು ಬಿ.ವಿ.ಕಾರಂತರಿಗೆ ಅರ್ಥಪೂರ್ಣ ಶ್ರ ಧಾಂಜಲಿ ಅಂದರು. ಆದರೆ ನನಗನಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಇಂದು ನಾಟಕಕಾರರು, ವಿಚಾರವಂತರು ಅದರಲ್ಲೂ ಅಕಾಡೆಮಿಕ್ ವಲಯದವರು ಗಂಭೀರವಾಗಿ ಆಲೋಚಿಸುವ ಕಾಲ. ಎಲ್ಲಾ ರಂಗಕರ್ಮಿಗಳನ್ನೂ ಒಗೊಡಿಸುವುದು.
ನಮ್ಮ ದ.ಕ.ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇಂದಿಗೂ ತುಳು ರಂಗಭೂಮಿ ಇಲ್ಲಿ ಜನಪ್ರಿಯ. ಇಲ್ಲಿನ ಕಲಾವಿದರು ಈಗಲೂ ಸ್ಟಾರ್ ಗಳು. ನಾಟಕ ಪ್ರದರ್ಶನವಿರುವ ಕಡೆ ಇಲ್ಲಿ ಇಂದಿಗೂ ನೂಕು ನುಗ್ಗಲು ಇದೆ. ಆದರೆ ಅದೇ ಜಾಗದಲ್ಲಿ ನೀನಾಸಂ ನಂಥ ತಂಡ ನಾಟಕ ಪ್ರದರ್ಷಿಸಿದರೆ ನೋಡಲು ಜನವೇ ಇಲ್ಲ. ಇದ್ದರೂ ಯು.ಜಿ.ಸಿ. ಸಂಬಳ ಪಡೆಯುವ ಕಾಲೇಜು ಉಪನ್ಯಾಸಕರು, ಸಾಹಿತ್ಯದ ಒಲವಿರುವ ಸಣ್ಣ ವರ್ಗ. ಹೀಗಾದರೆ ಆ ನಾಟಕ ಯಾರನ್ನು ತಲ್ಪುತ್ತದೆ?
ನಾವ್ಯಾಕೆ ಜನಪ್ರಿಯ ನಾಟಕಗಳ ಕಲಾವಿದರನ್ನು ನೀನಾಸಂ ಥರದ ಕಲಾವಿದರನ್ನು ಒಟ್ಟು ಸೇರಿಸಬಾರದು?
ಇಂಥದ್ದೇ ಪ್ರಶ್ನೆಯನ್ನು ಮೊನ್ನೆ ಮಂಚಿಗೆ ಬೆಂಗಳೂರಿನಿಂದ ಬಂದ ಬುದ್ದಿವಂತ "ರಂಗಕರ್ಮಿ’ಯನ್ನು ಯಾರೋ ಖಾಸಗಿಯಾಗಿ ಕೇಳಿದರಂತೆ. ಆಗವರು ಕೆಕ್ಕರಿಸಿ ನೋಡಿದರಂತೆ.

ಅಟ್ ಲೀಸ್ಟ್ ಬಿ.ವಿ.ಕಾರಂತ ಜೀವನಗಾಥೆಯನ್ನಾದರೂ ಅಂಥ ಮನೋಸ್ಥಿತಿಯುಳ್ಳವರು ಓದಲಿ..
ರಂಗಭೂಮಿ ಒಟ್ಟಾಗಲಿ... ಯುನಿವರ್ಸಿಟಿ ಪ್ರೊಫೆಸರ್, ಆಟೋ ಡ್ರೈವರ್ ಜತೆಜತೆಯಾಗಿ ಕುಳಿತು ಒಂದೇ ನಾಟಕವನ್ನು ನೋಡಿ, ಸರಿ ತಪ್ಪುಗಳ ವಿಮರ್ಷೆ ಮಾಡಲಿ..
ಹಾಗಾಗಬಹುದೇ?

ಸಿಂಗಲ್ ಕಾಲಂ ಸುದ್ದಿ ! ?

"ನಮಸ್ಕಾರ ಮಾರಾಯ್ರೆ”
ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕಿನ ಎದುರು ನಿಲ್ಲುವ ಟ್ಯಾಕ್ಸಿಗಳಲ್ಲಿ ಕುಳಿತುಕೊಳ್ಳುವ ಚಾಲಕರ ಪೈಕಿ ಆ ನಗುಮುಖದ ವ್ಯಕ್ತಿ ಹಾಗೆ ಹೇಳುವುದುಂಟು. ಇದು ಪ್ರತಿನಿತ್ಯದ ಕಾಯಕವಾದ ಕಾರಣ ಅಲ್ಲೇ ಬಸ್ಸಿಗೆಯೋ, ಇತರ ಕೆಲಸಕ್ಕೆಂದು ಹೋಗುವಾಗಲೋ ನಾನೂ ನಮಸ್ಕಾರ ಹೇಗಿದ್ದೀರಿ ಎಂಬ ಮಾಮೂಲಿ ಡೈಲಾಗ್ ಹೇಳುತ್ತೇನೆ. ಆತ ಸುಮ್ಮನೆ ನಗುತ್ತಾನೆ. ಅಲ್ಲಿಗೆ ನಮ್ಮ ಸಂಭಾಷಣೆ ಖತಂ.
ತಿಂಗಳ ಹಿಂದೆ ಸಾರಿಗೆ ಮಂತ್ರಿ ಅಶೋಕ್ ಖಾಸಗಿ ಬಸ್ಸುಗ್ಗಳನ್ನು ನಿಲ್ಲಿಸುವ ಪ್ರಸ್ತಾಪ ಇದೆ ಎಂದಾಗ ನಾನು ಆತನನ್ನು ಮಾತಿಗೆಳೆದೆ.
"ನಿಮ್ಮ ಚಾನ್ಸ್..ಇನ್ನು ಬಾಡಿಗೆ ಹೆಚ್ಹಾಗಬಹುದು”
’ಯಾರು ಹೇಳಿದ್ದು ನಿಮಗೆ’ ಆತ ಹೇಳಿದ. "ನಮ್ಮ ಬಾಡಿಗೆ, ವಹಿವಾಟು ಮಾಮೂಲಿಯಾಗೇ ಇರುತ್ತದೆ. ನನ್ನದು ಫಿಕ್ಸೆಡ್ ರೇಟ್. ಬೆಳಗ್ಗೆ ೬ಕ್ಕೆಲ್ಲಾ ಟ್ಯಕ್ಸಿ ಸ್ಟೇಂಡ್ ನಲ್ಲಿ ಇರ್ತೇನೆ. ಏರ್ಪೋರ್ಟ್, ರೈಲ್ವೇ ಸ್ಟೇಶನ್ ಗೆಂದು ಬರುವವರು, ಜಾಗ ಅಳೆಯಲು ಬರುವ ವಕೀಲರು ಹೀಗೆ ನನ್ನದೇ ಆದ ಕೆಲವು ಪಾರ್ಟಿ ಇರ್ತದೆ. ಹೇಗೋ ಹೊಟ್ಟೆಪಾಡು ನಡೆಯುತ್ತದೆ. ಎಲ್ಲಾ ಉಳಿಸಿ, ದಿನಕ್ಕೆ ೨೫೦ ರು. ಆದರೆ ಪುಣ್ಯ”
ಹೀಗೆ ಮಾತನಾಡಿದ ಮೇಲೆ ಆತ ತನ್ನ ಹೆಸರು ಹೇಳಿದ. "ನನ್ನ ಹೆಸರು ಸೂರ್ಯನಾರಾಯಣ. ಬಾಡಿಗೆ ಇದ್ದರೆ ಹೇಳಿ”
ಆಯ್ತು ಎಂದು ನಾನು ಹೊರಟೆ..
ಅದಾದ ಬಳಿಕ ನಮಸ್ಕಾರದಲ್ಲೇ ಮುಕ್ತಾಯ..
ಮೊನ್ನೆ ಎಂದಿನಂತೆ ಮಂಗಳೂರಿಗೆ ಹೋಗುವಾಗ ತುಂಬೆ ರಾಮಲ್ಕಟ್ಟೆ ಹತ್ತಿರ ನಜ್ಜುಗುಜ್ಜಾದ ಅಂಬಾಸಿಡರ್ ಕಾರು ಕಂಡಿತು. ಛೇ.. ಎಂದು ಮರುಕ ವ್ಯಕ್ತಪಡಿಸಿ ಅಫೀಸ್ ನ ಇತರ ವ್ಯವಹಾರದಲ್ಲಿ ಮುಳುಗಿದೆ. ಆದರೆ ರಾತ್ರಿ ಬಂದ ವರದಿ ಹೀಗಿತ್ತು.
ಅದಿರು ಲಾರಿ ಟೂರಿಸ್ಟ್ ಕಾರು ಮುಖಾಮುಖಿ, ಕಾರು ಚಾಲಕ ಸಾವು..
ಚಾಲಕನ ಹೆಸರು ಸೂರ್ಯನಾರಾಯಣ.
ಬೆಳಗಿನ ಜಾವ ರಾಂಗ್ ಸೈಡ್ದ್ನಲ್ಲಿ ಬಂದ ಅದಿರು ಲಾರಿ ಚಾಲಕನ್ನನ್ನು ಬಲಿ ತೆಗೆದುಕೊಂಡಿತು..
ಸಿಂಗಲ್ ಕಾಲಂ ಸುದ್ದಿ ಯಲ್ಲಿ ಸೂರ್ಯನಾರಾಯಣನ ಬದುಕು ಕೊನೆಗೊಂಡಿತ್ತು.
ಸೂರ್ಯ ಮೂಡುವುದಕ್ಕೆ ಸ್ವಲ್ಪ ಮೊದಲು ಅರ್ಧಕ್ಕೆ ನಿಂತ ಹೆದ್ದಾರಿ ಕಾಮಗಾರಿಯ ಅವಶೇಷಗಳಿಂದ ಎದ್ದ ಧೂಳು ನಿದ್ದೆಗಣ್ಣಲ್ಲಿ ರಾಂಗ್ ಸೈಡ್ನಲ್ಲಿ ಸಾಗಿದ ಅದಿರು ಲಾರಿಯು, ಸೂರ್ಯನಾರಾಯಣನ ಬದುಕಿನಲ್ಲಿ ಮತ್ತೆ ಸೂರ್ಯ ಮೂಡದಂತೆ ಮಾಡಿತ್ತು.
----------------
ನಿಮಗಿದು ಬೋರ್ ಶಬ್ದಗಳು ಎನಿಸಬಹುದೇನೋ..ಆದರೆ ಪ್ರತಿರಾತ್ರಿ ನಾನು ಮನೆಗೆ ಹೋಗುವ ವೇಳೆ ತುಂಬೆಯತ್ತ ನನ್ನ ವಾಹನ ಹೋಗುವಾಗಲೆಲ್ಲಾ ಸೂರ್ಯನಾರಾಯಣ ನೆನಪಾಗುತ್ತಾನೆ..

ಹೆಡ್ಲೈಟ್ ಡಿಮ್ ಮಾಡದ ಅತಿಕಾಯ ಅದಿರು ಲಾರಿಗಳೆಲ್ಲಾ ಯಮದೂತರಂತೆ ಕಾಡುತ್ತಾರೆ..

Sunday, November 30, 2008

ಅಳಿದ ಮೇಲೆ..

ಸತ್ಯಮೇವ ಜಯತೇ ಎನ್ನಲು ನಾಲಗೆ
ಹೊರಳುತ್ತಿಲ್ಲ ಕಾರಣ ಊರು ತುಂಬ
ಅಸತ್ಯ, ಅನೀತಿ, ಅಸಹ್ಯ ಮಾತುಗಳ
ಬರೆಹಗಳ ಸುರಿಮಳೆಯ ದರ್ಶನ
ದುಸ್ಸಾಹಸ, ದುಷ್ಟಬುದ್ದಿ, ದುರಾಕ್ರಮಣ
ಎಂದು ನಾವು ಮತ್ತೆ ಮತ್ತೆ ನಮ್ಮನ್ನೇ
ದೂರುವ ಸಂದರ್ಭ ಬೇಕಿತ್ತೆ
ಮುಂಬಯಿಯಲ್ಲಿ ದೊಡ್ಡ ದೊಡ್ದ ಮನುಜರ
ಕತ್ತರಿಸಿ ಕೊಂದ ನೆತ್ತರ ಕೋಡಿ ಹರಿಸಿದ
ಮೇಲಷ್ಟೇ ಪ್ರಪಂಚಕ್ಕೆ ಅರಿವಾಯಿತು
ಮತಾಂಧರ ಉನ್ಮತ್ತ ಹೆಜ್ಜೆಯ ಗುರುತು
ಮೈಕು ಹಿಡಿಸುವ ಮಲ್ಟಿನ್ಯಾಶನಲ್ ಮೀಡಿಯಾ
ದೊರೆಗಳು, ಕೊಚ್ಹೆಗುಂಡಿಗಳಿಗೆ ಹೋಗಲು
ಹೇಳುತ್ತಿಲ್ಲ, ಏಕೆಂದರೆ ಅವಕ್ಕೂ ಬೇಕು ಮಾರ್ಕೆಟ್
ಅದಕ್ಕಾಗಿ ಭಾರತವಿಂದು ಭೀತಿವಾದಿಗಳ, ಕೊಳಕು
ಜನರ ಬೇಳೆ ಬೇಯಿಸುವ ಟಾರ್ಗೆಟ್..

Monday, November 10, 2008

ಪಯಣದ ಹಾದಿ..

ಅಂದು ಸುಮ್ಮನೇ ಕುಳಿತು
ಪರ್ವತದ ಶಿಖರದಿಂದ
ಬಗ್ಗಿ ನೋಡಿ ಪುಟ್ಟ ಮನೆ,
ಬಸ್ಸುಗಳ ನೋಡಿ ಖುಷಿಯಿಂದ
ಕುಣಿದಿದ್ದೆ....
ನಾನೆಷ್ಟು ಎತ್ತರದಲ್ಲಿದ್ದೇನೆ?
ಮತ್ತೆ ಹಾಗೇ ಇಳಿದು ಸುಮ್ಮನೇ
ರಸ್ತೆಯಲ್ಲಿರುವ ದೊಡ್ಡ ದೊಡ್ದ
ಲಾರಿ ಬಸ್ಸುಗಳ ನೋಡಿ
ಮಂಕಾದೆ...
ನಾನೆಷ್ಟು ಕೆಳಗಿದ್ದೇನೆ?
ಯಾರೋ ಹೇಳಿದರು,
ನಾನು ನೋಡಿ ತಿಳಿದೆ
ಎತ್ತರಕ್ಕೆ, ಪಾತಾಳಕ್ಕೆ
ಪಯಣಿಸುವುದು ನಮ್ಮ ಕೈಯಲ್ಲೇ
ಇದೆ..ಅದು ಸುಮ್ಮನೇ ನಮ್ಮ ಹಾದಿಯಲ್ಲಿ
ಬೇಡವಾದಾಗಲೂ ಸಿಗುತ್ತದೆ
ಆದರೆ ಬೆಟ್ಟ ಅಣಕಿಸುತ್ತದೆ
ನಾನೇರಿದೆತ್ತರಕೆ ನೀನೇರಬಲ್ಲೆಯಾ?

Tuesday, October 21, 2008

ಅವಳು ಹಾಗೇ....

ಮಾಯಾಂಗನೆಯ ಕುಡಿನೋಟಕ್ಕೆ
ಮರುಳಾಗಿ, ತನುಮನದೊಂದಿಗೆ
ಬಿಜಯಂಗೈದರೂ
ಬಿಸಿಗಾಳಿ, ಹನಿಬೆವರು ಹರಿಸಿದರೂ
ವಿಕ್ರಮಿಗೆ ವಿಜಯ ಸಿಗಲಿಲ್ಲ!
ಏಕೆಂದರೆ ಅವಳು ವಸುಂಧರೆ
ಎಷ್ಟೇ ಆಕ್ರಮಣ, ಅತ್ಯಾಚಾರ,
ಅನಾಚಾರಕ್ಕೂ ಅವಳು
ತಲೆಬಾಗುವುದಿಲ್ಲ...!
ಅತಿಯಾಸೆಗೆಂದು ಆಕೆಯ
ಬಲಾತ್ಕಾರ ನಡೆದರೂ,
ಅವಳ ಹಸಿರು ಹೊದಿಕೆ,
ಸೆಳೆದೆಳೆದರೂ, ಆಕೆ
ನಳನಳಿಸುತ್ತಾಳೆ...
ಆದರೆ ಒಂದೊಮ್ಮೆ
ಅವಳು ಮಗ್ಗಲು ಬದಲಾಯಿಸಿದರೆ..
ಯಾವ ವಿಕ್ರಮಿಯೂ ಉಳಿಯುವುದಿಲ್ಲ..

Monday, October 6, 2008

ಗೊತ್ತಿದ್ದರೆ ಹೇಳಿ!

ಯಾರು ಭೀತಿವಾದಿ?
ನೆಲ, ಜಲ ನುಂಗುವವನಾ?
ಕಾಡಿನ ಮುಗ್ಧರ ನಂಬಿಸಿ
ಅವರನ್ನು ವ್ಯವಸ್ಥೆ ವಿರುಧ
ಎತ್ತಿಕಟ್ತುವವರಾ?
ಮಂದಿರ, ಮಸೀದಿ, ಚರ್ಚು
ಹಾನಿ ಮಾಡಿದವರಾ?
ಪ್ರಚಾರಕ್ಕೆ ಕಣ್ಣೊರಸುವ
ಕುಟಿಲ ರಾಜಕಾರಣಿಗಳಾ?
ಸೈಕಲ್, ರೈಲು, ಸೇತುವೆ
ಅಲ್ಲಿ, ಇಲ್ಲಿ ಎಲ್ಲೆಲ್ಲಿ
ಬಾಂಬಿಟ್ತು ನಮ್ಮನ್ನು ಉಡಾಯಿಸುವ
ಮತಾಂಧರಾ?
ಅಥವಾ ಅವರ
ಬೆನ್ನ ಹಿಂದೆ ನಿಂತು
ಮಾನವತಾವಾದಿಯಂತೆ
ಪೋಸು ಕೊಡುವ
ಸಾಹಿತಿ, ಚಿಂತಕರಾ?

Wednesday, September 24, 2008

ಲಕ್ಷ್ಮಣ ರೇಖೆ..


ನಮ್ಮ ಗಡಿ ಯಾವುದು?
ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆ ಇದು.
ನಮ್ಮನ್ನು ನಿಯಂತ್ರಿಸಲು ಪೂರ್ವಜರು ಮಾಡಿದ ಕಟ್ತುಪಾಡುಗಳಲ್ಲಿ ಇದೂ ಒಂದು ಎಂಬುದು ನನ್ನ ಗ್ರಹಿಕೆ. ಎಷ್ತೇ ಸ್ವಾತಂತ್ರ್ಯ ಇರಲಿ. ಗಡಿ ದಾಟುವ ಸಾಹಸ ಮಾಡುವವರು ಕಡಿಮೆ. ಇದು ಭಾಷೆ, ಸಂಸ್ಕ್ರತಿ, ಜಾತಿ ಇತ್ಯಾದಿಗಳಿಗೆ ಅನ್ವಯ ಆಗುತ್ತದೆ. ನೀವು ಮಂಗಳೂರಿನಿಂದ ಕಾಸರಗೋಡಿಗೆ ಹೋದಾಗ, ಶಿವಮೊಗ್ಗದಿಂದ ಹುಬ್ಬಳ್ಳಿಗೆ ಹೋದಾಗ, ಹಾಸನದಿಂದ ಬೆಂಗಳೂರು, ಮೈಸೂರಿನಿಂದ ಕೋಲಾರ, ಬಳ್ಳಾರಿಯಿಂದ ಆಂಧ್ರ, ಬೆಳಗಾವಿಯಿಂದ ನಿಪ್ಪಾಣಿಗೆ ನಿಮ್ಮ ಸ್ವಂತ ವಾಹನದಲ್ಲಿ ಅಲ್ಲಲ್ಲಿ ನಿಲ್ಲಿಸಿಕೊಂಡು ಅವರಿವರನ್ನು ಮಾತನಾಡಿಸಿಕೊಂಡು ಹೋದಾಗ ಅನುಭವಕ್ಕೆ ಬರುತ್ತದೆ.
ವಿಟ್ಲದಿಂದ ಅಡ್ಯನಡ್ಕ, ಅಲ್ಲಿಂದ ಪೆರ್ಲಕ್ಕೆ ಹೋಗಿ. ಅಲ್ಲಿನ ಬಸ್ ನಿಲ್ದಾಣದಲ್ಲಿ ಸುಮ್ಮನೆ ನಿಲ್ಲಿ. ಕನ್ನಡ ಭಾಷೆಯನ್ನು ಗಮನಿಸಿ. ಎಷ್ತೊಂದು ಬದಲಾವಣೆ? ಪೆರ್ಲ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡುವಿನ ಸಾಮಾನ್ಯ ವ್ಯಕ್ತಿಯ ಮನೆಮಾತು ಕನ್ನಡ ಇದ್ದರೂ ಅಪ್ಪಟ ಮಲಯಾಳಿ ಶೈಲಿಯಲ್ಲೇ ಆತನ ಹಾವ ಭಾವ ಇರುತ್ತದೆ. ನಮ್ಮ ಬೆಂಗಳೂರಿನ ಕೆಲವೊಂದು ಓರಾಟಗಾರರು ಮಾತ್ರ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹೂಂಕಾರ ಮಾಡುವುದು, ಕೆಲವೊಂದು ಸಾಹಿತಿಗಳು ಪಣ ತೊಡುವುದನ್ನು ಬಿಟ್ಟರೆ ಕಾಸರಗೋಡಿನ ಸಾಮಾನ್ಯ ಕನ್ನಡಿಗರು ಅಲ್ಲಿ ಹಾಯಾಗಿದ್ದಾರೆ. ಗೌರವದಿಂದಲೇ ಇದ್ದಾರೆ. ಮಲಯಾಳಿಗಳ ಮೇಲೆ ಕನ್ನಡಿಗರು, ಕನ್ನಡಿಗರ ಮೇಲೆ ಮಲಯಾಳಿಗಳು ಸವಾರಿ ಮಾಡಿದ್ದು ಕಡಿಮೆ.
ಇದೇ ಬಾಂಧವ್ಯ. ಪರಸ್ಪರ ಹೊಂದಾಣಿಕೆ ಇದ್ದಾಗ ಮಾತ್ರ ಇದು ಸಾಧ್ಯ.
‘ನಾನು ಕರ್ನಾಟಕಕ್ಕೆ ಬರುವುದಿಲ್ಲ’
ಕರ್ನಾಟಕದ ಕೆಂಪು ಪಟ್ತಿಯ ವ್ಯವಸ್ಠೆಯಿಂದ ರೋಸಿ ಹೋದ ಅಪ್ಪಟ ಕನ್ನಡ ಪ್ರೇಮಿ ಹಾಯಾಗಿ ಬದಿಯಡ್ಕ ಬಳಿ ನಿವ್ರತ್ತ ಜೀವನ ಸಾಗಿಸುತ್ತಿದ್ದಾರೆ. ಅವರ ಮಾತಿದು. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ ಹೀಗೆ ಅವರು ಹೇಳಿದ್ದರು.
ಇದು ಸುಳ್ಳು ಅಲ್ಲ ಎಂದು ನನಗನಿಸುತ್ತದೆ.....(ನನ್ನ ವೈಯಕ್ತಿಕ ನಿಲುವು)
ನಿಮಗೆ?




Sunday, September 21, 2008

ಆನಂದ ಬೋಳಾರ ನೆನಪು


ಸುಮಾರು ಹದಿನೆಂಟು ವರ್ಷಗಳ ಹಿಂದೆ ನಡೆದ ಘಟನೆ. ನಾನಾಗ ಮಂಗಳೂರಿಂದ ಬೆಂಗಳೂರಿಗೆ ರೈಲಿನಲ್ಲಿ ಹೋಗುತ್ತಿದ್ದೆ. ಹತ್ತನೇ ಕ್ಲಾಸು ಮುಗಿಸಿ ಬೇಸಗೆ ರಜೆ ಕಳೆಯಲು ಬೆಂಗಳೂರು ನಗರಕ್ಕೆ ಹೋಗುವುದು ಎಂದರೆ ನಮ್ಮಂಥ ಹಳ್ಲಿ ಹುಡುಗರಿಗೆ ಸ್ವರ್ಗ ಸಿಕ್ಕಿದಂತೆ.
ಅದು ರಾತ್ರಿಯ ರೈಲು ಪ್ರಯಾಣ. ನನ್ನ ಮೊದಲ ಪ್ರಯಾಣವೂ ಹೌದು.

ಹಾಗಾಗಿ ಕಿಟಿಕಿಯವರೆಗೆ ಬೀಳ್ಕೊಡಲು ಅಪ್ಪ, ಅಮ್ಮ ಬಂದಿದ್ದರು. ಸಾವಿರಾರು ಜಾಗ್ರತೆಯನ್ನು ಕೇಳಿ ಕಾದಿರಿಸಿದ ಸೀಟಿನಲ್ಲಿ ತರಂಗ ಓದುತ್ತಾ ಕುಳಿತೆ....
ಸುಮಾರು ಹೊತ್ತಾದ ಮೇಲೆ ಹಾಗೆಯೆ ನಿದ್ದೆಗೆ ಜಾರಿದೆ.

ಮಧ್ಯರಾತ್ರಿ ಕಳೆದು ಬೆಳಕು ಹರಿಯುವ ಹೊತ್ತು.

ಜೋರಾಗಿ ಕೇಕೆ, ನಗು ಕೇಳಿ ಬೆಚ್ಹಿ ಕುಳಿತೆ. ಹಾಗೆಯೇ ಹತ್ತಿರದ ಸೀಟಿನ ಬಳಿ ಇಣುಕಿ ನೋಡಿದೆ.ಹತ್ತು ಹದಿನೈದು ಮಂದಿ ತುಳುವಿನಲ್ಲಿ ಮಾತನಾಡುತ್ತಾ ಜೋಕ್ ಮಾಡುತ್ತಾ ಕುಂತಿದ್ದರು.

ಅವರಲ್ಲೊಬ್ಬ ಮಧ್ಯ ವಯಸ್ಕ ನನ್ನನ್ನು ನೋಡಿ ಎಲ್ಲಿ, ಯಾವೂರು ಎಂದೆಲ್ಲ ವಿಚಾರಿಸಿದರು.

ಮಾಂಬಾಡಿ ಎಂದಾಗ ನನ್ನಜ್ಜ, ಯಕ್ಶಗಾನದ ಬಗ್ಗೆ ಕೇಳಿದರು. ನನ್ನನ್ನು ಗೊತ್ತಾ ಎಂದು ಕೇಳಿದರು. ಗೊತ್ತಿಲ್ಲ ಎಂದೆ. ನಾನು ಆನಂದ ಬೋಳಾರ. ನಾಟಕದಲ್ಲಿ ಹಾಸ್ಯ ಮಾಡುತ್ತೇನೆ. ಇವರೆಲ್ಲಾ ಚಾ ಪರ್ಕ ತಂಡದ ಕಲಾವಿದರು. ಬೆಂಗಳೂರಿನಲ್ಲಿ ಶೋ ಇದೆ. ನೀನೂ ಬಾ ಅಂದರು.

ಬೆಂಗಳೂರು ರೈಲು ನಿಲ್ದಾಣದಲ್ಲಿ ನನ್ನನ್ನು ಕರಕೊಂಡು ಹೋಗಲು ಬಂದ ದೊಡ್ಡಪ್ಪಗೆ ಅವರನ್ನು ಪರಿಚಯಿಸಿದೆ.
ಅದೇ ಮೊದಲು ಮತ್ತು ಕೊನೆ. ನನ್ನ ಮತ್ತು ಆನಂದ ಬೋಳಾರ ಭೇಟಿ.

ಇವತ್ತ್ತು ಅಂಥ ಸರಳ ಸಜ್ಜನ ಮಹಾನ್ ಕಲಾವಿದ ನಿಧನರಾಗಿದ್ದಾರೆ. ಅವರು ತುಳು ರಂಗಭೂಮಿಯ ಮೇರುನಟ ಎಂದು ಗೊತ್ತಾದ ಮೇಲೆ ಅವರ ಹಲವಾರು ನಾಟಕಗಳನ್ನು ನೋಡಿದ್ದೆ.

ಈ ಸುದ್ದಿ ನೋಡಿದಾಗ ಹಳೆಯದೆಲ್ಲಾ ನೆನಪಾಯಿತು ನೋಡಿ.

ಬಹುಶ ಬೋಳಾರರು ಬೆಂಗಳೂರಿನಲ್ಲಿ ಸಿನೆಮಾ ರಂಗದಲ್ಲಿ ಇದ್ದಿದ್ದರೆ ಇನ್ನೂ ಮಿಂಚುತ್ತಿದ್ದರೋ ಏನೋ..

Wednesday, September 17, 2008

ಕಂದನ ಅಳಲು....

ಅಮ್ಮಾ ನಂಗೆ ಮೊಸರು ಬೇಕು
ಪುಟ್ಟ ಕಂದನ ಅಳಲು
ಹಾಲು ತರಲು ಹೋದ ಅಪ್ಪ
ಇನ್ನೂ ಬರಲು ಇಲ್ಲ
ಊರಿಡೀ ಹಾಲಾಹಲ
ಜನರ ಮಧ್ಯ ಎಲ್ಲಿ ಹಾಲು, ಮೊಸರು?
ಪುಟ್ಟ ಮಗುವಿಗೇನು ಗೊತ್ತು
ಜನರ ಜಗಳ ರಗಳೆ!
ಗಲಭೆಕೋರರಿಗೆ ಏನು ಗೊತ್ತು
ಪುಟ್ಟ ಕಂದನ ಕಷ್ಟ?
ಪುಟ್ಟ ಬಾಲೆಗೇನು ಗೊತ್ತು
ದಾಂಧಲೆಕೋರರ ಇಷ್ತ?

Monday, September 8, 2008

ಜಗಜೀವನ..

ತಹತಹಸಿತು ಇಳೆ
ಧಾರೆ ಅಲ್ಲಿ ರಕ್ತದ ಮಳೆ
ಕೇಸರಿ, ಹಸಿರು ಶಾಲು
ತ್ಯಾಗ ಇಲ್ಲ ಬರಿ ಭೋಗ
ವಸಾಹತುಶಾಹಿಯ ಸುಖ
ನಾಡು ಪ್ರಾಣಿ, ಕಾಡು ಮನುಷ್ಯ
ಕೆಂಪು ನೆತ್ತರು ಕಪ್ಪು ಪಟ್ಟಿ
ಒಳಗೂ ಹೊರಗೂ ಮೀರ್ ಸಾದಿಕರು
ಆಪಾತ್ರಗೆ ಆಧಿಕಾರ
ನೆಲ, ಜಲ ಮಾರಾಟದ ಸರಕು
ಎಲ್ಲಿ ಒಲವೆ ನಮ್ಮ ಬದುಕು?

Thursday, September 4, 2008

ಜಿಂಕೆ ಮರಿ ಮತ್ತು ಗಣಪ

"ಅಯೋಧ್ಯ” ಹೊಟೇಲ್ ಹತ್ತಿರ ರಾತ್ರಿ ಊಟ ಮುಗಿಸಿ ನಿಂತಿದ್ದೆ..
‘ಜಿಂಕೆ ಮರೀನ ’ ಹಾಡು ಕೇಳಿ ಬಂತು.
ಗೆಳೆಯ ಮಂಜು ಗೊಣಗಿದ. ‘ಶುರು ಆಯ್ತು ಈ ಮಕ್ಕಳ ಗಲಾಟೆ...’ .
‘ಏನು ಮಾರಾಯಾ’ ಕುತೂಹಲದಿಂದ ಕೇಳಿದೆ.
"ಇದು ಮೆಡಿಕಲ್ ಕಾಲೇಜು ಮಕ್ಕಳ ಗಣಪನ ವಿಸರ್ಜನೆ ಗೌಜಿ... "
ಹೌದಲ್ವ, ಇವತ್ತು ಚೌತಿ.. ವಿನಾಯಕನ ಆರಾಧನೆ. ಮಂಗಳೂರಿನ ಮೆಡಿಕಲ್ ಕಾಲೇಜಿನ ಮಕ್ಕಳ ಭಕ್ತಿ ಕಂಡು ಸೋಜಿಗವಾಯ್ತು.
ಆದರೆ ಒಂದು ವಿಷಯ ಗೊತ್ತಾಗಲಿಲ್ಲ.
‘ಜಿಂಕೆ ಮರೀನ ’ ಎಲ್ಲಿ? ಗಣಪನಿಗೂ ಏನು ಸಂಬಂಧ?
ತಿಳಿಸುತ್ತಿರಾ?