Thursday, April 9, 2009

ಕನವರಿಕೆ ೧

ಬ್ಬಾ ಅದೇನು ಹಾರಾಟ
ಕಡುನೀಲಿ ಬಣ್ಣದ ಜಲರಾಶಿಗೆ
ಜಿಗಿಜಿಗಿದು ಆಕಾಶ ಚುಂಬಿಸುವಂತೆ
ಉಕ್ಕೇರಿ ತಿಳಿಯಾಗಿ ಹರಿದು
ಶುಶ್ಕ ಮರಳನ್ನು ಮುತ್ತಿಕ್ಕುತ್ತದೆ
ಮತ್ತೆ ಮತ್ತೆ ಹಾರಿ ಅಪ್ಪಳಿಸಿ ಮರಳುತ್ತದೆ
ಬೇಕನಿಸಿದಾಗ ಕೈಸಿಗದ ಮರೀಚಿಕೆಯಂತೆ
ಮರುಳು ಮಾನವನಿಗೋ ತಡೆಯಲಾರದ
ಹಸಿವು,ನೀರಡಿಕೆ, ಉಪ್ಪುನೀರೇನು ನೀಡಬಲ್ಲದು
ಬರೀ ಆಸೆ, ಕುಡಿಯಲಾಗುವುದಿಲ್ಲ
ಕುಡಿದರೂ ಹೊರಕಕ್ಕಬೇಕು ಎಲ್ಲಾ ಆಕಾಂಕ್ಷೆ

Monday, March 30, 2009

ಕನ್ನಡ, ಮಲಯಾಳ, ಕಾಸರಗೋಡು..

ಹಳೇ ಪೇಪರ್ ರಾಶಿಯನ್ನು ನೋಡುತ್ತಿದ್ದಾಗ ಆ ಘೋಷಣೆ ಕಣ್ಣಿಗೆ ಬಿತ್ತು.
‘ಕಾಸರಗೋಡನ್ನೂ ಕರ್ನಾಟಕಕ್ಕೆ ಸೇರಿಸಿಯೇ ಸಿದ್ದ’
******
ಹಳೆಯ ಮಾತು ಹಾಗಿರಲಿ,
ನಿಜಕ್ಕೂ ಈಗಿನ ಕಾಸರಗೋಡಿನ ಕನ್ನಡಿಗರು ಗಂಭೀರ ಸಮಸ್ಯೆಯಲ್ಲಿದ್ದಾರಾ?
ಗಡಿನಾಡಿನ ಜನತೆ ‘ಭಾಷೆ’ಯಿಂದಾಗಿ ಪರಕೀಯರಾಗುತ್ತಿದ್ದಾರ?
ಕೇರಳ ಸರ್ಕಾರ ಕನ್ನಡಿಗರಿಗೆ ಅಷ್ಟೊಂದು ಅನ್ಯಾಯ ಮಾಡುತ್ತಿದೆಯಾ?
ಆ ಘೋಷಣೆ ಓದಿದ ಕರ್ನಾಟಕದ ಇತರ ಪ್ರಾಂತ್ಯದವರಿಗೆ ಈ ಕುತೂಹಲ ಮೂಡುವುದು ಸಹಜ.
ಆದರೆ ವಿಷಯ ಹಾಗಿಲ್ಲ.
********
ಈಗಿನ ಕಾಸರಗೋಡು ಪ್ರದೇಶ(ಜಿಲ್ಲೆ) ಎರಡು ಸಂಸ್ಕೃತಿಗಳನ್ನೂ ಮೈಗೂಡಿಸಿಕೊಂಡಿರುವ ತಾಣ. ಇಡೀ ಜಿಲ್ಲೆಯನ್ನೊಮ್ಮೆ ಸುತ್ತಾಡಿ. ಕ್ರೀಮ್ ಕಲರ್ ಪಂಚೆ, ಅರ್ಧ ತೋಳಿನ ಶರಟು, ಮುಖದಲ್ಲಿ ಅಡ್ಡನಾಮ.(ಹಿಂದೂವಾದರೆ), ನೀಟಾಗಿ ಬಾಚಿದ ತಲೆ ಇದು ಟಿಪಿಕಲ್ ಕಾಸರಗೋಡು ಪ್ರದೇಶದ ಪುರುಷರ ರೀತಿ. ಮಹಿಳೆಯರೂ ಅಪ್ಪಟ ಮಲೆಯಾಳಿಗಳಂತೆ. ಕನ್ನಡ, ತುಳುವಿನಲ್ಲಿ ಮಾತನಾಡಿದರೂ ಮಲಯಾಳದಲ್ಲೇ ಉತ್ತರ. ನಿಮಗೆ ಅರ್ಥವಾಗದಿದ್ದರೆ ಮಾತ್ರ ಕನ್ನಡ, ತುಳು ಮಾತು.
ಹಾಗಾದರೆ ಇವರು ಕನ್ನಡಿಗರೇ, ಮಲಯಾಳಿಗಳೇ?
ಇವರಲ್ಲಿ ಹಲವರು ಮನೆಯಲ್ಲಿ ಕನ್ನಡ, ತುಳು ಮಾತನಾಡುವವರು. ಹೊರಗೆ ಅಪ್ಪಟ ಮಲಯಾಳಿಗಳು. ಹಾಗೆಂದು ಅವರಿಗೆ ಯಾವ ಭಾಷೆಯ ಮೇಲೆ ತಿರಸ್ಕಾರ ಇಲ್ಲ.
ಇಲ್ಲಿ ಕನ್ನಡ ಶಾಲೆಗಳಿವೆ. ಯಾರೂ ಅಲ್ಲಿಗೆ ಹೋಗಬೇಡಿ ಎಂಬ ಬಲವಂತ ಮಾಡುವುದಿಲ್ಲ. ನೀನು ‘ಕನ್ನಡದವನು’ ಎಂದು ಅಂಗಡಿಯಲ್ಲಿ ಅಕ್ಕಿಗೆ ೨ ರು. ಜಾಸ್ತಿ ಚಾರ್ಜ್ ಮಾಡುವುದಿಲ್ಲ. ಒಟ್ಟಿನಲ್ಲಿ ಅನ್ಯೋನ್ಯತೆಯಿದೆ.
*****
ಇದು ಭಾಷೆಯ ಮಾತಾಯಿತು. ಇನ್ನು ಆಡಳಿತದ ಕಡೆ ನೋಡೋಣ.
ಬಹುಪಾಲು ಕನ್ನಡಿಗರು ಕಾರ್ಮಿಕರು. ಇಲ್ಲಿನ ಕಾರ್ಮಿಕರಿಗೆ ಸಿಕ್ಕುವ ಉದ್ಯೋಗ ಭದ್ರತೆ ಕರ್ನಾಟಕದಲ್ಲಿ ಇಲ್ಲ.!
ಭ್ರಷ್ಟಾಚಾರಿಗಳ ಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ. ನೀವು ಇಲ್ಲಿ ಭೂಮಿಯನ್ನು ಹೊಂದಿದ್ದರೆ ಇಲ್ಲಿ ಪಂಚಾಯತ್ ಸೌಕರ್ಯಗಳನ್ನು, ಸುಲಭವಾಗಿ ಹೊಂದಬಹುದು. ನಮ್ಮ ‘ನೆಮ್ಮದಿ’ ಕೇಂದ್ರದಂತಲ್ಲ!
ಕಾಸರಗೋಡಿನ ರಸ್ತೆಗಳನ್ನು ನೋಡಿ. ಕರ್ನಾಟಕದ ರಸ್ತೆಗಳನ್ನು ನೋಡಿ. ವಿಟ್ಲದಿಂದ(ಕರ್ನಾಟಕ) ಬದಿಯಡ್ಕ(ಕೇರಳ)ಕ್ಕೆ ಹೋಗುವಾಗ ಅಡ್ಕಸ್ಥಳ ಎಂಬಲ್ಲಿಂದ ರಸ್ತೆ ಹೇಗಿರುತ್ತೆ ಎಂಬುದನ್ನು ಅಲ್ಲಿ ಡ್ರೈವ್ ಮಾಡಿದವನೇ ಹೇಳಬೇಕು.
*****
ಕನ್ನಡ ಕರಾವಳಿಯ ಯಕ್ಷಗಾನಕ್ಕೆ, ಕಲಾವಿದರಿಗೆ ಮನ್ನಣೆ ನೀಡುವಲ್ಲಿ ಕೇರಳ ಸರ್ಕಾರ ಒಂದು ಹೆಜ್ಜೆ ಮುಂದಿದೆ. ದಕ್ಷಿಣ ಕನ್ನಡ, ಕಾಸರಗೋಡಿನ ಯಕ್ಷಗಾನ ಕಲಾವಿದರ ಬಳಿ ‘ಖಾಸಗಿ’ಯಾಗಿ ಮಾತನಾಡಿ. ಕನ್ನಡ ಕರಾವಳಿಯ ಕಲಾವಿದರು, ಸಾಹಿತಿಗಳು ಬೆಂಗಳೂರಿಗೆ ಹೋಗದೆ ಊರಿನಲ್ಲಿ ತಮ್ಮ ಪಾಡಿಗೆ ಇದ್ದರೆ ಕರ್ನಾಟಕ ಸರ್ಕಾರ ಮಲತಾಯಿ ಧೋರಣೆ ತಾಳುತ್ತದೆ ಎಂಬುದು ಅವರ ಮಾತು. ಇನ್ನು ಇಲ್ಲಿನ ಅನೇಕ ಪ್ರತಿಭಾವಂತರು ಗಡಿನಾಡ ಕನ್ನಡಿಗರ ಕೋಟಾದಿಂದ ಕಲಿತು ಈಗ ಸುಖವಾಗಿದ್ದಾರೆ.
****
ಕಾಸರಗೋಡನ್ನು ಕೇರಳದಿಂದ ಬಿಡಿಸಿ ಕರ್ನಾಟಕಕ್ಕೆ ಸೇರಿಸಿ ಎಂದು ಹೇಳಿಕೆ ನೀಡುವವರು, ಅವರನ್ನು ಬೆಂಬಲಿಸುವವರು ಪ್ರಾಕ್ಟಿಕಲ್ ಆಗಿ ಆಲೋಚಿಸುವುದು ಒಳ್ಳೇದು.

Tuesday, March 10, 2009

ದೀಪದ ಕೆಳಗೆ!

ಅದ್ಯಾವುದೋ ಪನ್ನೀರ ಕೊಳ
ಅಲ್ಯಾವುದೋ ಬಿಳಿಹಂಸಜೋಡಿ
ಮತ್ತೆ ಮತ್ತೆ ಮುತ್ತಿಕ್ಕುತ್ತಿದೆ ಗೊತ್ತಿಲ್ಲ
ಆರ್ಥಿಕ ಹೊಡೆತ, ಬೆಲೆಯೇರಿಕೆಗಳ ಮಾರಿ
ಪನ್ನೀರನ್ನೂ ಕಲಕುತ್ತೆ,ಹಂಸದ ಬಣ್ಣ ಬದಲಿಸುತ್ತೆ
ಅದ್ಯಾವನೋ ಊರ ಡೊಂಕ ತಿದ್ದುವ
ಭ್ರಮೆಯ ಹಮ್ಮು ಬಿಮ್ಮಿನ ಲೇಖನಿಗ,
ಅಲ್ಯಾವುದೋ ಕುಟುಂಬ ಅವನ ನಿರೀಕ್ಷೆಯಲ್ಲಿ
ಗೊತ್ತುಂಟು ಅವನಿಗೂ,ಬಳಗಕ್ಕೂ ಬೆಲೆಯೇರಿದರೂ
ಕಿಸೆ ಭರ್ತಿಯಾಗುವುದಿಲ್ಲ, ಹಾಲುಗಲ್ಲದ ಕಂದಮ್ಮ
ಚಿನ್ನದ ಪುಟ್ಟ ಓಲೆಯ ಮಾತಾಡುವುದರ ಕೇಳುವ
ಧೈರ್ಯ ಅವನಿಗೆಲ್ಲಿ, ಊರಿಗಿಡೀ ಪ್ರಕಾಶಿಸುವ
ದೀಪದ ಕೆಳಗೆ ಕತ್ತಲೇ ತಾನೇ?
ಗುಲಾಮನೂ ದೊರೆಯಾದರೆ ಅವನು ದೊರೆಯಂತೇ
ಆಡುವ ಆದರೆ ಮತ್ತೊಬ್ಬ ನವಗುಲಾಮ ಹುಟ್ಟುತ್ತಾನೆ
ಇದು ಜಗಜೀವನ, ಇಲ್ಲೇನಿದೆ ಬರಿ ಕತ್ತಲು,
ಅಲ್ಲಲ್ಲ ದೊಡ್ಡ ದೊಡ್ಡ ಸೋಡಿಯಂ ದೀಪಗಳು!

Friday, February 27, 2009

ನನ್ನೊಳಗಿನ ಪ್ರಶ್ನೋತ್ತರ

ಹೀಗೊಂದು ಸಮಸ್ಯೆ
ನಾವೇನು? ದೇವನಿರ್ಮಿತರೇ,
ಹಾಗಾದರೆ ನಾವೆಲ್ಲರೂ ಪರಿಪೂರ್ಣರೇ?
ಕಾಮ, ಕ್ರೋಧಾದಿಗಳು ನಮ್ಮಲ್ಲೂ ಇಲ್ಲವೇ
ದೇವನಿರ್ಮಿತವಲ್ಲವೂ ಪರಿಪೂರ್ಣವೆಂದಾದರೆ
ಮಾನವನೂ ಸಂಪೂರ್ಣ ಅಲ್ಲವೇ?
ದೇವನೊಬ್ಬ ನಾಮ ಹಲವು ಎಂದಾದರೆ
ಈ ವಿರೋಧಾಭಾಸ ಯಾಕೆ ಅಲ್ಲವೇ?
*********
ಹೀಗೊಂದು ಸಮಾಧಾನ
ಸಭ್ಯತೆಯ ಮುಸುಕಿಗೆ ಅಸಭ್ಯತೆಯ ಸೋಂಕು
ಬಡಿಬಡಿದು ರಾಚಿದಾಗ, ಹೆದರಿಕೆ ಸತ್ತು
ಮಸಣ ಸೇರಿದಾಗ ಉಂಟಾದ ತಥ್ಯ ದೇವರಿದ್ದಾನೆ
ಅವನಿಗಾದರೂ ಅಂಜು,ನಾಚಿಕೆಪಡು, ಅವನಿಂದ
ನಿರ್ಮಿಸಲ್ಪಟ್ಟ ನಾವು ಅವನಂತೆ ಪರಿಪೊರ್ಣರಲ್ಲ
ಏಕೆಂದರೆ ಕಾಮ, ಕ್ರೋಧಾದಿಗಳು ನಮ್ಮನ್ನು ಬಿಡುವುದಿಲ್ಲ
ಅದಕ್ಕಾಗೇ ಇಸ್ಟೋಂದು ದೇವರಲ್ಲಿ ಯಾರನ್ನಾದರೂ ನಂಬು

Friday, February 20, 2009

ಇಂಥವರೂ ಇದ್ದಾರೆ

ಅದು ಬಂಟ್ವಾಳ ರೈಲ್ವೇ ನಿಲ್ದಾಣ.
ದಿನಕ್ಕೆ ಎರಡು ಪ್ರಯಾಣಿಕರ ರೈಲು ಓಡಾಡುವಾಗ ಜನಸೇರುವುದನ್ನು ಬಿಟ್ಟರೆ ಮತ್ತಲ್ಲಿ ಮೌನ.
ಉಳಿದಂತೆ ಇಡೀ ದಿನ ಅಲ್ಲಿ ವಾಕಿಂಗ್ ಹೋಗುವವರು, ಕಟ್ಟೆಯಲ್ಲಿ ಕುಳಿತುಕೊಳ್ಳುವ ಅಲೆಮಾರಿಗಳಿಗದು ಪ್ರಶಸ್ತ ತಾಣ.
ಹಾಗಾಗಿಯೋ ಏನೊ ಮೊನ್ನೆ ಆ ನಿವ್ರುತ್ತಿನಂಚಿನಲ್ಲಿರುವ ಟೀಚರ್ ಕೂಡಾ ಅಲ್ಲೇ ಗೌಜಿ ಮಾಡಿಕೊಂಡು ಬಿಡಾರ ಮಾಡಿದ್ದು. ಏನಮ್ಮಾ ಇಲ್ಲ್ಯಾಕೆ ಬಂದಿ ಎಂದು ಸ್ಟೇಶನ್ ಮಾಸ್ತರ್ ಕೇಳಿದರೆ ‘ನೀನ್ಯಾರು’ ಎಂದು ಜೋರು ಮಾಡುತ್ತಾ ಕುಳಿತಿದ್ದ ಟೀಚರ್ ಎಲ್ಲರ ಗಮನ ಸೆಳೆದರು.
*********
ಟೀಚರಿಂದು ದುರಂತದ ಕಥೆ. ಗಂಡ ಜತೆಗಿಲ್ಲ. ಮಗ ಓಡಿ ಹೋಗಿದ್ದಾನೆ. ಆ ಚಿಂತೆ ಮನಸ್ಸಿನ ತುಂಬೆಲ್ಲಾ ಹರಡಿ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು. ಹಾಗೇ ಇದ್ದ ಬಾಡಿಗೆ ಮನೆ ಬಿಟ್ಟು ನೆಮ್ಮದಿ ಅರಸಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು. ಹತ್ತಿರವೇ ಶಿಕ್ಷಣ ಇಲಾಖೆಯ ಕಚೇರಿ ಇದ್ದರೂ ಟೀಚರ್ ನೆರವಿಗೆ ಯರೂ ಬರಲಿಲ್ಲ. ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಯಿತು. ಪ್ರಯೋಜನ ಶೂನ್ಯ..
*********

ಹೌದು. ಯಾಕೆ ಬರುತ್ತಾರೆ? ಮಹಿಳೆಯರ ಪರ ಹೋರಾಟ ಮಾಡುವ ಸಂಘಟನೆಗಳು, ಟಿ.ವಿ. ಕ್ಯಾಮೆರಾಗಳು, ಅದೇ ಸಮಯದಲ್ಲಿ ಪಬ್ಬಿಗೆ ಹೋದ ಇನ್ನೂ ಯಾರೆಂದು ಗೊತಿಲ್ಲದ ಶ್ರೀಮಂತ ಗಣ್ಯ ವ್ಯಕ್ತಿಗಳ ಮಕ್ಕಳ ಮಾನ ಹರಾಜಾದ ಘಟನೆಯನ್ನು ಲೋಕಕ್ಕೆಲ್ಲಾ ತಿಳಿಸಲು ಪೈಪೋಟಿ ನಡೆಸುತ್ತಿದ್ದ ಕಾಲ ಅದು. ಪತ್ರಿಕೆಗಳಲ್ಲಿ(ಒಂದು ಬೆಳಗ್ಗಿನ, ಎರಡು ಸಂಜೆಯ) ವರದಿ ಬಂತು. ಅದೇ ಸಮಯಕ್ಕೆ ಪಬ್ಬು, ಬಾರಿಗೆ ಬಂದ ಮಹಿಳಾ ಆಯೋಗದ ಎರಡೂ ಬಣದ ಸದಸ್ಯರಿಗೆ ಕೇವಲ ೨೫ ಕಿ.ಮೀ. ಇರುವ ಬಿ.ಸಿ.ರೋಡಿಗೆ ಬರಲಾಗಲಿಲ್ಲ...

*********
ಹೋಗಲಿ ಬಿಡಿ, ಯಾರು ಬರದಿದ್ದರೇನಾಯಿತಂತೆ ಎಂದು ಯಾವ ಊರು ಉಧ್ಹಾರದ ಸಂಘಟನೆಯಲ್ಲೂ ಗುರುತಿಸದ ಕೆಲವರು ಟೀಚರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಮಾನಸಿಕ ತಪಾಸಣೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ೮, ೯ ಸಾವಿರ ಖರ್ಚನ್ನು ತಾವೇ ಭರಿಸಿದರು..
ಈಗ ಟೀಚರ್ ಗುಣಮುಖರಾಗುತ್ತಿದ್ದಾರೆ...

*********
ಒಬ್ಬ ಮಹಿಳೆಯನ್ನು ಯಾವುದೇ ಸಂಘ, ಸಂಸ್ಥೆಗಳ ನೆರವಿಲ್ಲದೇ ಮಾನವೀಯತೆಯಿಂದ ಸಹಾಯ ಮಾಡುವವರು ಎಶ್ಟೋ ಮಂದಿ ನಮ್ಮ ಮಂಗಳೂರಲ್ಲಿದ್ದಾರೆ. ಇಂಥವರು ನಿಮ್ಮೂರಲ್ಲೂ ಇರಬಹುದು.
ನಿಮಗಿದು ತಿಳಿದಿರಲೆಂದು ಬರೆದೆ. ಸುಮ್ಮನೇ ಎಲ್ಲಿಂದಲೋ ಬಂದವರು ನಮ್ಮೂರನ್ನು ‘ತಾಲಿಬಾನ್’ ಎಂದಾಗ ಬೇಸರವಾಗುತ್ತದೆ. ಭಾರತದ ಎಲ್ಲಾ ಊರಿನಂತೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇದೆ. ಮತಾಂಧರ ಜೊತೆ ಮಾನವೀಯತೆ ಇದ್ದವರೂ ಇದ್ದಾರೆ..
*********
ಅಂದ ಹಾಗೆ, ಟೀಚರನ್ನು ಆಸ್ಪತ್ರೆಗೆ ಕರೆದೊಯ್ದವರಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಮ್ - ಎಲ್ಲಾ ಧರ್ಮದವರೂ ಇದ್ದರು.. ಯಾರೂ ನಾನಿಂಥವನು ಎಂದು ಹೇಳಿಕೊಳ್ಳಲಿಲ್ಲ..

Friday, February 13, 2009

ಪ್ರೀತಿಯ ಸೆಲೆ

ಹಸಿವ ಕಂಗಳು,ಒಣಗಿದ ತುಟಿಗಳ ಏರು ಜವ್ವನೆಗೆ
ಬಿಗಿದಪ್ಪಿ ಮುತ್ತಿನ ಮಳೆ ಎರೆಯಲು ಎಲ್ಲಿದೆ ಪುರುಸೊತ್ತು?
ಹಳ್ಳಿಯ ಹವೆಯೂ ಈಗ ಮಲಿನಗೊಂಡಿದೆ ಹುಟ್ಟಿದ್ದಕ್ಕೆ,
ಅಪ್ಪುವುದಕ್ಕೆ, ಬಟ್ಟೆ ಹಾಕುವುದಕ್ಕೆ, ಕಳಚುವುದಕ್ಕೊಂದು
ದಿನ ಎಂಬ ಆಚರಣೆಯೇ ಸೋಜಿಗ ತಂದಿದೆ..
ತೊದಲು ನುಡಿಯನಾಡುವ ಹಸುಳೆಗೇನು ಗೊತ್ತು?
ಇನ್ನು ಮುಂದೆ ಬಾಳ ಪಯಣ ಯಾರ ಮನೆಯ ತೊತ್ತು?
ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ
ಸೆಂಟ್,ಪೌಡರ್ ಹಾಕಿ ಕೆಂಭೂತದಂತೆ ಪಾರ್ಕುಗಳಲ್ಲಿ
ಅಂಡಲೆದು ಕೆಟ್ಟ ಜಾಗತೀಕರಣದ ಲಿಪ್ ಸ್ಟಿಕ್ ನ ಚುಂಬನಕ್ಕೆ
ದಿನ, ಮುಹೂರ್ತ ಪ್ರತ್ಯೇಕ ಯಾಕೆ?
ಪ್ರೀತಿಯ ಸೆಲೆ ಕಾಣಲು ಕಳ್ಳತನವೇಕೆ?