ಸುಮಾರು ಹದಿನೆಂಟು ವರ್ಷಗಳ ಹಿಂದೆ ನಡೆದ ಘಟನೆ. ನಾನಾಗ ಮಂಗಳೂರಿಂದ ಬೆಂಗಳೂರಿಗೆ ರೈಲಿನಲ್ಲಿ ಹೋಗುತ್ತಿದ್ದೆ. ಹತ್ತನೇ ಕ್ಲಾಸು ಮುಗಿಸಿ ಬೇಸಗೆ ರಜೆ ಕಳೆಯಲು ಬೆಂಗಳೂರು ನಗರಕ್ಕೆ ಹೋಗುವುದು ಎಂದರೆ ನಮ್ಮಂಥ ಹಳ್ಲಿ ಹುಡುಗರಿಗೆ ಸ್ವರ್ಗ ಸಿಕ್ಕಿದಂತೆ.
ಅದು ರಾತ್ರಿಯ ರೈಲು ಪ್ರಯಾಣ. ನನ್ನ ಮೊದಲ ಪ್ರಯಾಣವೂ ಹೌದು.
ಹಾಗಾಗಿ ಕಿಟಿಕಿಯವರೆಗೆ ಬೀಳ್ಕೊಡಲು ಅಪ್ಪ, ಅಮ್ಮ ಬಂದಿದ್ದರು. ಸಾವಿರಾರು ಜಾಗ್ರತೆಯನ್ನು ಕೇಳಿ ಕಾದಿರಿಸಿದ ಸೀಟಿನಲ್ಲಿ ತರಂಗ ಓದುತ್ತಾ ಕುಳಿತೆ....
ಸುಮಾರು ಹೊತ್ತಾದ ಮೇಲೆ ಹಾಗೆಯೆ ನಿದ್ದೆಗೆ ಜಾರಿದೆ.
ಮಧ್ಯರಾತ್ರಿ ಕಳೆದು ಬೆಳಕು ಹರಿಯುವ ಹೊತ್ತು.
ಜೋರಾಗಿ ಕೇಕೆ, ನಗು ಕೇಳಿ ಬೆಚ್ಹಿ ಕುಳಿತೆ. ಹಾಗೆಯೇ ಹತ್ತಿರದ ಸೀಟಿನ ಬಳಿ ಇಣುಕಿ ನೋಡಿದೆ.ಹತ್ತು ಹದಿನೈದು ಮಂದಿ ತುಳುವಿನಲ್ಲಿ ಮಾತನಾಡುತ್ತಾ ಜೋಕ್ ಮಾಡುತ್ತಾ ಕುಂತಿದ್ದರು.
ಅವರಲ್ಲೊಬ್ಬ ಮಧ್ಯ ವಯಸ್ಕ ನನ್ನನ್ನು ನೋಡಿ ಎಲ್ಲಿ, ಯಾವೂರು ಎಂದೆಲ್ಲ ವಿಚಾರಿಸಿದರು.
ಮಾಂಬಾಡಿ ಎಂದಾಗ ನನ್ನಜ್ಜ, ಯಕ್ಶಗಾನದ ಬಗ್ಗೆ ಕೇಳಿದರು. ನನ್ನನ್ನು ಗೊತ್ತಾ ಎಂದು ಕೇಳಿದರು. ಗೊತ್ತಿಲ್ಲ ಎಂದೆ. ನಾನು ಆನಂದ ಬೋಳಾರ. ನಾಟಕದಲ್ಲಿ ಹಾಸ್ಯ ಮಾಡುತ್ತೇನೆ. ಇವರೆಲ್ಲಾ ಚಾ ಪರ್ಕ ತಂಡದ ಕಲಾವಿದರು. ಬೆಂಗಳೂರಿನಲ್ಲಿ ಶೋ ಇದೆ. ನೀನೂ ಬಾ ಅಂದರು.
ಬೆಂಗಳೂರು ರೈಲು ನಿಲ್ದಾಣದಲ್ಲಿ ನನ್ನನ್ನು ಕರಕೊಂಡು ಹೋಗಲು ಬಂದ ದೊಡ್ಡಪ್ಪಗೆ ಅವರನ್ನು ಪರಿಚಯಿಸಿದೆ.
ಅದೇ ಮೊದಲು ಮತ್ತು ಕೊನೆ. ನನ್ನ ಮತ್ತು ಆನಂದ ಬೋಳಾರ ಭೇಟಿ.
ಇವತ್ತ್ತು ಅಂಥ ಸರಳ ಸಜ್ಜನ ಮಹಾನ್ ಕಲಾವಿದ ನಿಧನರಾಗಿದ್ದಾರೆ. ಅವರು ತುಳು ರಂಗಭೂಮಿಯ ಮೇರುನಟ ಎಂದು ಗೊತ್ತಾದ ಮೇಲೆ ಅವರ ಹಲವಾರು ನಾಟಕಗಳನ್ನು ನೋಡಿದ್ದೆ.
ಈ ಸುದ್ದಿ ನೋಡಿದಾಗ ಹಳೆಯದೆಲ್ಲಾ ನೆನಪಾಯಿತು ನೋಡಿ.
ಬಹುಶ ಬೋಳಾರರು ಬೆಂಗಳೂರಿನಲ್ಲಿ ಸಿನೆಮಾ ರಂಗದಲ್ಲಿ ಇದ್ದಿದ್ದರೆ ಇನ್ನೂ ಮಿಂಚುತ್ತಿದ್ದರೋ ಏನೋ..