Sunday, February 1, 2009

ಪಾಪಿ ದುನಿಯಾ..!

ಜನವರಿ ೨೫, ಭಾನುವಾರ.
ರಾತ್ರಿ ೨.೪೫ರ ಸಮಯ.
ಸ್ಥಳ: ಪಡೀಲ್ ಸಮೀಪದ ರೈಲ್ವೇ ಮೇಲ್ಸೇತುವೆಯ ಅಡಿ ರಾ.ಹೆ.೪೮.
ಅಲ್ಲೇ ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಹೆದ್ದಾರಿ ಕಾಮಗರಿ ನಡೆಸುತ್ತಿದ್ದ ಹಿಟಾಚಿ ಯಂತ್ರದ ಕೈ ಅಪ್ಪಳಿಸಿದ್ದು.
ಕಾರಿನ ಮುಂಭಾಗದ ಗಾಜು ಹುಡಿಯಾಗಿತ್ತು. ಮುಂದೆ ಕುಳಿತಿದ್ದ ಚಾಲಕ, ನಾನು ಬದುಕಿದ್ದೇ ಒಂದು ಪವಾಡ...
ಇರಲಿ ಇದು ಮಾಮೂಲಿ ಸಂಗತಿ. ಇಂಥದ್ದೆಷ್ಟೋ ನಡೆಯುತ್ತವೆ.
**********
ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿ, ಅತಿಭಾರದ ಅದಿರುಲಾರಿ ಸಂಚಾರ, ನೋಡಿಯೂ ನೋಡದಂತಿರುವ ಆಡಳಿತ, ಈ ಕುರಿತು ಸ್ಥಳೀಯ ಪತ್ರಿಕೆಗಳು ಬರೆದರೂ ಪ್ರಯೋಜನ ಆಗಿರಲಿಲ್ಲ..ಹೀಗಾಗಿ ನ್ಯಾಷನಲ್ ಚಾನಲ್ ನೋಡಿದೊಡನೇ ಛೇ..ನಮ್ಮ ಹೆದ್ದಾರಿಯ ಬಗ್ಗೆ, ಹಗಲು ರೈಲು ಓಡಾಟದ ಬಗ್ಗೆ ಬಿತ್ತರಿಸಲಿ ಎಂದು ಹಾರೈಸುತ್ತಿದ್ದೆ. ಮೊನ್ನೆ ಅಪಘಾತ ಆದಾಗಲೂ ಹಾಗೇ ಅಂದುಕೊಂಡೆ.
**************
ಮರುದಿನ ಸೋಮವಾರ ಮತ್ತೆ ಕೆಟ್ಟ ರಸ್ತೆಯಲ್ಲಿ ಮಧ್ಯಾಹ್ನ ಮಂಗಳೂರಿನತ್ತ ಬರುತ್ತಿದ್ದೆ. ಉದ್ದುದ್ದದ ಟ್ರಾಫಿಕ್ ಜಾಂ.. ಪ್ರಯಾಣಿಕರೆಲ್ಲರೂ ಹಿಡಿಶಾಪ ಹಾಕುತ್ತಿದ್ದರು...ಹಾಗೂ ಹೀಗೂ ಪಂಪ್ ವೆಲ್ ಬಳಿ ಬಂದಾಗ ಬುರ್ರನೆ ಟಿ.ವಿ(ನ್ಯಾಶನಲ್). ವ್ಯಾನೊಂದು ಪಾಸಾಯಿತು. ಅಬ್ಬ.. ಇನ್ನು ಮಂಗಳೂರಿಗರ ಸಮಸ್ಯೆ ಪರಿಹಾರ ಸ್ವಲ್ಪ ಮಟ್ಟಿಗಾದರೂ ದೆಹಲಿಮಟ್ಟಕ್ಕೆ ಹೋಗಬಹುದು ಅಂದುಕೊಂಡೆ.
ಆಗ ಸಮಯ ೧೨.೩೦..ಮಟ ಮಟ ಮಧ್ಯಾಹ್ನ..ಜನವರಿ ೨೬. ಮಂಗಳೂರು ಎಂದಿನಂತೇ ಇತ್ತು. ಮಹಿಳೆಯರು, ಮಕ್ಕಳು ನಿರ್ಭಯವಾಗಿ ನಗುನಗುತ್ತಾ ಪೇಟೆಸಂಚಾರ ಮಾಡುತ್ತಿದ್ದರು. ...
ನಮ್ಮ ಕೆ.ಎಸ್.ರಾವ್ ರಸ್ತೆಯಲ್ಲಿ ಎಂದಿಗಿಂತ ಹೆಚ್ಹಿನ ಜನ..ರಜೆ ಅಲ್ವಾ?
********
ಟಿ.ವಿ.ಯಲ್ಲಿ ನ್ಯಾಶನಲ್ ಚಾನೆಲ್ ನಲ್ಲಿ ಭಾರೀ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಇಡೀ ಮಂಗಳೂರು ಭಯಭೀತವಾಗಿದೆ..ಹಾಗೆ, ಹೀಗೆ ಎಂದು..ಆ ಹೊತ್ತಿನ ಮಟ್ಟಿಗೆ ಅದು ಸುಳ್ಳೂ ಆಗಿತ್ತು...ಕೂಡಲೇ ಹೇಳಿದೆ ಏನು ಮಾರಾಯ್ರೆ, ಜ್ವಲಂತ ಸಮಸ್ಯೆಗಳು ಹಲವಾರಿವೆ. ಅವಕ್ಕೆಲ್ಲ ಈ ಟಿ.ವಿ. ಚಾನೆಲ್ ಗಳು ಮಂಗಳೂರಿಗೆ ಬರುವುದಿಲ್ಲ. ಈ ಸುದ್ದಿಗಿಂತ ಇನ್ನೂ ದೊಡ್ದ ಸುದ್ದಿ ಬೇಕಾದಸ್ಟಿದೆ ಮಾರಾಯ್ರೇ?
ತಕ್ಷಣ ಒಬ್ಬ ಉದ್ವೇಗದಿಂದ ಹೇಳಿದ ಹಾಗಾದರೆ ಹೆಣ್ಣು ಮಕ್ಕಳಿಗೆ ಹೊಡೆದದ್ದು ನಿಮಗೇನೂ ಅಲ್ವ?
************
ಹೆಣ್ಣು ಮಕ್ಕಳಿಗೆ ಹೊಡೆದದ್ದು ತಪ್ಪು. ಒಪ್ಪಿಕೊಳ್ಳೋಣ. ಅದು ಶನಿವಾರ ೨೪, ಜನವರಿಯಂದು ನಡೆದ ಘಟನೆ. ಅದರ ಬಗ್ಗೆ ಬೇಕಾದ ಚರ್ಚೆ ನಡೆದಿವೆ. ಆದರೆ ಪ್ರಾಣವನ್ನೇ ತೆಗೆಯುವಂಥ ಹೆದ್ದಾರಿ ಅವ್ಯವಸ್ಥೆಯೂ ಸಮಸ್ಯೆಯೇ ಅಲ್ಲವೇ..
********
ಈ ಗೊಂದಲ ನನ್ನ ತಲೆ ಹೊಕ್ಕಿತು. ಬಿಡಿ..ನಾನೊಬ್ಬ ಸಾಮಾನ್ಯ ಮನುಷ್ಯ. ಸತ್ತರೆಷ್ಟು, ಬಿಟ್ಟರೆಷ್ಟು? ಪಾಪ ಪಬ್ಬಿಗೆ ಹೋಗಿ ಕುಣಿದು ಕುಪ್ಪಳಿಸುವವರಿಗಾಗಿ, ಆಮಲು ಪದಾರ್ಥ ಸೇವಿಸಿ ರಾತ್ರಿ ಅಲ್ಲಲ್ಲಿ ಬಿದ್ದುಕೊಳ್ಳುವವರಿಗಾಗಿ ಅಲ್ಲವೇ ಸಪೋರ್ಟ್?
ಏನಂತೀರಿ?

13 comments:

VENU VINOD said...

ಹೈಸೊಸೈಟಿಯ ಮೇಲೆ ಆಗುವ ಸಣ್ಣ ಗೀರುಗಳೂ ಇಲೈಟ್ ಮಾಧ್ಯಮಗಳಿಗೆ ಮಾರಣಾಂತಿಕ ಹಲ್ಲೆಯಾಗಿ ಗೋಚರವಾಗುತ್ತವೆ...ನಿಮ್ಮ ಹಳ್ಳಿಯಲ್ಲಿ ಯಾರೋ ಹುಡುಗಿಯನ್ನು ಯಾವನೋ ಹುಡುಗ ಹಾರಿಸಿ, ಚಪ್ಪರಿಸಿ ಕೊಂದರೆ ಅದು ಯಾರಿಗೆ ಬೇಕು! ಲೋಕಲ್ ಮಾಧ್ಯಮಗಳಿಗೆ ಸಾಕು...
ಇದು ಇಂದಿನ ಧೋರಣೆ...ಪಾಪ ಪಬ್ಬಲ್ಲಿ ಪೆಟ್ಟು ತಿಂದ ಮಕ್ಕಳ ಮನಃಸ್ತಿತಿ ಹೇಗಿರಬಹುದು ಎಂಬುದು ಟಿವಿ ಚಾನೆಲ್‌ಗಳ ಮುಂದಿನ ವಿಶ್ಲೇಷಣೆ ಇರಬಹುದು

shivu.k said...

ಹರೀಶ್,

ಮಾದ್ಯಮಗಳಿಗೆ ಸೆನ್ಸೇಷನಲ್ ನ್ಯೂಸ್‌ಗಳು ಬೇಕು...

ರಸ್ತೆ...ಹೆದ್ದಾರಿ ಟ್ರಾಫಿಕ್ ಜಾಮ್, ಅಪಘಾತ...ಇವೆಲ್ಲಾ ಅವರಿಗೆ " ದಿನಾ ಸಾಯೋರಿಗೆ ಅಳುವವರ್ಯಾರು" ಅನ್ನೋ ಕತೆ....

ಇದು ನಮ್ಮ ನಿತ್ಯ ಕರ್ಮ ಅನುಭವಿಸಲೇಕು...

ಹರೀಶ ಮಾಂಬಾಡಿ said...

ವೇಣು,
ಹೌದಲ್ಲ ಪಬ್ಬಲ್ಲಿ ಪೆಟ್ಟು ತಿಂದ ಮಕ್ಕಳ ಮನಃಸ್ತಿತಿ ಹೇಗಿರಬಹುದು ಎಂದು ನೋಡಲು ಇನ್ನೂ ಯರೂ ಹೋಗಿಲ್ಲ ಯಾಕೆ? ಆ ಮಕ್ಕಳು ಯಾರು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರಲ್ಲ?

ಶಿವು,
ನ್ಯಾಷನಲ್ ಚಾನಲ್ ನವರು ಮಂಗಳೂರನ್ನು ವಿಶ್ಲೇಷಿಸಿದ ರೀತಿ ಹಾಗಿತ್ತು. ಮತ್ತೆ ರಸ್ತೆ...ಹೆದ್ದಾರಿ ಟ್ರಾಫಿಕ್ ಜಾಮ್, ಅಪಘಾತ...ಇವೆಲ್ಲಾ ನಮಗೂ " ದಿನಾ ಸಾಯೋರಿಗೆ ಅಳುವವರ್ಯಾರು" ಅನ್ನೋ ಕತೆಯಂತಾಗಿದೆ ಅನಿಸುತ್ತದೆ.

hEmAsHrEe said...

ಹರೀಶ್ ಅವ್ರೇ,
ಮಂಗಳೂರಿನ ಬಗ್ಗೆ ಬಹಳ ವಿಷಯಗಳನ್ನು ತುಂಬಾ ಚೆನ್ನಾಗಿ ಕಲೆ ಹಾಕಿದ್ದೀರಿ. ನಿಮ್ಮ ಬ್ಲಾಗ್ ಅನ್ನು ಅಕಸ್ಮಾತ್ತಾಗಿ ಇಷ್ಟು ದಿನಗಳ ನಂತರ ನೋಡಿದೆ.

ನಿಜವಾಗಿಯೂ ಈಗಿನ ಮಂಗಳೂರು ದೈತ್ಯಾಕಾರವಾಗಿ ಬೆಳೆದುಬಿಟ್ಟಿದೆ. ಹತ್ತು-ಇಪ್ಪತ್ತು ವರುಷಗಳ ಹಿಂದಿನ laid back life ಈಗ ಅಲ್ಲಿಲ್ಲ.

ಇನ್ನು ನಿಮ್ಮ ಬರಹ ಓದುತ್ತಿದ್ದ ಹಾಗೆ ಹಂಪನಕಟ್ಟೆ, ಜ್ಯೋತಿ ಸರ್ಕಲ್, ಕೆ ಎಸ್ ರಾವ್ ರೋಡ್, ಸಾಯ್ಬೀನ್ ಕಾಂಪ್ಲೆಕ್ಸ್ ಇನ್ನೂ ಎಲ್ಲ ಹಳೆಯ ದಿನಗಳು ನೆನಪಿಗೆ ಬಂದವು. thanks. ಹೀಗೆಯೇ ಬರೆಯುತ್ತಿರಿ.

chetana said...

೨೪ಕ್ಕಾ!?

ಹರೀಶ ಮಾಂಬಾಡಿ said...

ಹೇಮಶ್ರೀ,
ಮಂಗಳೂರು ನೆನಪಾದುದಕ್ಕೆ ಮಂಗಳೂರಿಗನ ಥ್ಯಾಂಕ್ಸ್.

ಚೇತನ,
ಹೌದು. ಶ್ರೀರಾಮಸೇನೆ ಪಬ್ಬಿಗೆ ನುಗ್ಗಿ ಪುಂಡಾಟಿಕೆ ಮಾಡಿದ್ದು ಶನಿವಾರ ೨೪ರಂದು. ಸಂಜೆ ೫ರ ಸುಮಾರಿಗೆ ಟಿ.ವಿ.೯ರಲ್ಲಿ ಅದರ ಸುದ್ದಿ ಬರಲು ಆರಂಭವಾಗಿತ್ತು. ಅದೇ ದಿನ ೫ ಮಂದಿಯ ಬಂಧನವೂ ಆಗಿತ್ತು. ಮರುದಿನ ಭಾನುವಾರ ಅದಕ್ಕೆ ಬೇರೆ ಆಯಾಮ ಬಂತು. ರಾಷ್ತ್ರೀಯ ಚಾನೆಲ್ ಗಳು ಶನಿವಾರ ತಡರಾತ್ರಿ ದಾಳಿ ನಡೆದಿದೆ ಎಂದು ಆದಿತ್ಯವಾರ ಹೇಳಿದರೆ, ಅದು ಆದಿತ್ಯವಾರದ ಘಟನೆ ಎಂದು ಸೋಮವಾರ ಬಿಂಬಿಸಿದವು. ಬೇಸರದ ಸಂಗತಿಯೆಂದರೆ ಪಬ್ಬಿಗೆ ಹೋಗುವ ಬೋಲ್ದ್ ಹುಡುಗಿಯರು ಈಸ್ಟೋಂದು ಬೆಂಬಲ ಇದ್ದಾಗಲೂ ದೂರು ಕೊಡದೇ ಇದ್ದುದು.

ಚಿತ್ರಾ ಸಂತೋಷ್ said...

ನೀವು ಹೇಳಿದ್ದು ಸರಿಯಾಗೇ ಇದೆ...
ನಮ್ ಮುಖ್ಯಮಂತ್ರಿಯವರು ಪಬ್ನಲ್ಲಿ ಕುಡಿಬಹುದು, ಕುಣಿಬಾರದು ಅಂದಿದ್ದಾರೆ ಸರ್..ಪಾಪ ಕುಡಿದು ಕಿಕ್ಕೇರಿ ಕುಣಿದರೆ ಮತ್ತೆ ಮುಖ್ಯಮಂತ್ರಿಗಳೇ ಕೋಲು ಹಿಡಿದು ನಿಲ್ಲಬೇಕಾಗುತ್ತದೆ.
-ಚಿತ್ರಾ

Unknown said...

adu channelgala hottepaadu annabahuda? avarige...beda bidi..ene baredaroo namma vritti baandhavara bagge apamaana maadidantaagutte!

ಹರೀಶ ಮಾಂಬಾಡಿ said...

ಚಿತ್ರಾ,
ಮುಖ್ಯಮಂತ್ರಿಗಳು ಕೋಲು ಹಿಡಿದರೂ ಕಿಕ್ಕೇರಿದವರು ಕುಣಿಯುತ್ತಲೇ ಇರಬಹುದು. ಏಕೆಂದರೆ ಇದು ಮಾದಕ ಪ್ರಪಂಚ...!

ಸಂಗಮೇಶ್,
ಗಲಾಟೆ ಆಗುವಾಗ, ರಕ್ತ ಒಸರುತ್ತಿರುವ ದೇಹ ಕಂಡಾಗ ನಮ್ಮ ವ್ರುತ್ತಿಬಾಂಧವರು ಫೋಟೋ, ವರದಿ ಮಾಡುವುದು ಹೊಟ್ಟೆಪಾಡು ಅನ್ನಬಹುದು. ಆದರೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳಿ ಅವರ ಮೇಲಿನವರನ್ನೂ ಏಮಾರಿಸಿದರೆ ಏನು ಹೇಳುವುದು?

Pramod said...

ಟೈ೦ಸ್ ಆಫ್ ಇ೦ಡಿಯ ಮೊದಲಾಗಿ ಎಲ್ಲಾ ಮಾಧ್ಯಮಗಳೂ ಬರೀ ಇಷ್ಟೇ ಮಾಡೋದು..ನೋಡಿ ಮೈ ಎಲ್ಲಾ ಉರಿತದೆ..ಎಲ್ಲ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿ ತೋರಿಸುವ ಕಲೆ..ಇದಕ್ಕೆ ಪರಿಹಾರ ಇಲ್ಲ..

ಹರೀಶ ಮಾಂಬಾಡಿ said...

thanks pramod

ವಿ.ರಾ.ಹೆ. said...

ಹೀಗೆ ಆದ್ರೆ ಮಾಧ್ಯಮಗಳ ವಿರುದ್ಧ ಜನ ಕೈಗೆ ಕೋಲು ತೆಗೆದುಕೊಳ್ಳೋ ದಿನಗಳು ದೂರ ಇಲ್ಲ ಅನ್ನಿಸುತ್ತೆ.

ಹರೀಶ ಮಾಂಬಾಡಿ said...

ಇನ್ನೂ ಏನೆಲ್ಲ ಆಗಲಿಕ್ಕಿದೆಯೋ...